ರಾಯಚೂರು: ಸರ್ಕಾರ ಏನು ಮಾಡುತ್ತಿಲ್ಲ, ಜನಪ್ರತಿನಿಧಿಗಳು ನಮ್ಮ ಗ್ರಾಮಕ್ಕೆ ಬರಲ್ಲ, ಸಮಸ್ಯೆಗಳು ಬಗೆಹರಿಯಲ್ಲ ಅನ್ನುವರಯ ಇವತ್ತಿನ ಪಬ್ಲಿಕ್ ಹೀರೋ ನೋಡಬೇಕು. ರಾಜಕೀಯದಿಂದ ದೂರ ಉಳಿದ ಗ್ರಾಮಸ್ಥರು ಭಾಗ್ಯವಂತರಾಗಿದ್ದಾರೆ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಭಾಗ್ಯನಗರ. ಇಡೀ ಜಿಲ್ಲೆಗೆ ಮಾದರಿಯಾಗಿರೋ ಈ ಗ್ರಾಮವಾಗಿದ್ದು, ನೋಡಲಿಕ್ಕೆ ಅಷ್ಟೇ ಹಳ್ಳಿಯಂತಿದೆ. ಆದರೆ ಯಾವ ಮೂಲಭೂತ ಸೌಕರ್ಯದಲ್ಲೂ ಹಿಂದುಳಿದಿಲ್ಲ. ಸರ್ಕಾರ ಮಾಡದಿದ್ದರೇನು? ನಾವೇನ್ ಕೈಲಾಗದವರ ಅನ್ನೋ ಗ್ರಾಮಸ್ಥರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ.

ಮೂವತ್ತು ವರ್ಷಗಳ ಕೆಳಗೆ 2 ಎಕರೆ ಜಾಗದಲ್ಲಿ ಗ್ರಾಮಸ್ಥರು ಸ್ವಂತ ಖರ್ಚಿನಲ್ಲಿ ಕೆರೆ ನಿರ್ಮಿಸಿಕೊಂಡಿದ್ದಾರೆ. 6 ಗುಂಟೆ ಜಾಗದಲ್ಲಿ ತಾವೇ ಶಾಲೆ ನಿರ್ಮಿಸಿ, ಶಿಕ್ಷಕರನ್ನ ನೇಮಿಸಿಕೊಂಡಿದ್ದು ಈಗ ಸರ್ಕಾರಿ ಶಾಲೆಯಾಗಿದೆ. ಸರ್ಕಾರಿ ಯೋಜನೆಗಳನ್ನೂ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.
ಕೆರೆ ನೀರಿನಿಂದ ಕೃಷಿ ಮಾಡುತ್ತಿದ್ದು, ಉಪ ಕಸುಬಾಗಿ ಹೈನುಗಾರಿಕೆಯನ್ನ ಆರಂಭಿಸಿದ್ದಾರೆ. ಅಡುಗೆಗೆ ಬಯೋ ಗ್ಯಾಸ್ ಬಳಕೆ ಮಾಡುತ್ತಿದ್ದಾರೆ. ವಿದ್ಯುತ್ ಸಂಪರ್ಕದ ಸಂಪೂರ್ಣ ಕೆಲಸವನ್ನೂ ಗ್ರಾಮಸ್ಥರೆ ನಿರ್ವಹಿಸಿದ್ದಾರೆ. ಈ ಹಿಂದೆ ಮಣ್ಣಿನ ರಸ್ತೆಯನ್ನೂ ನಿರ್ಮಿಸಿಕೊಂಡಿದ್ದರು, ಈಗ ಅದಕ್ಕೆ ಕಾಂಕ್ರಿಟ್ ಹಾಕಲಾಗಿದೆ. ಸದ್ಯಕ್ಕೆ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಮುಂದಾಗಿದ್ದಾರೆ.

180 ಮನೆಗಳಿರುವ ಗ್ರಾಮದಲ್ಲಿ ಒಂದು ಸಾವಿರ ಮತದಾರರಿದ್ದಾರೆ. ಆದ್ರೆ ಗ್ರಾಮದಲ್ಲಿ ರಾಜಕೀಯದ ಗಾಳಿ ಮಾತ್ರ ಇದುವರೆಗೂ ಬೀಸಿಲ್ಲ. ಹೀಗಾಗಿ ಗ್ರಾಮಸ್ಥರೆಲ್ಲಾ ಒಟ್ಟಾಗಿ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದಾರೆ.
https://www.youtube.com/watch?v=ldFjP4IMhis

Leave a Reply