ಪಿಎಸ್‍ಐ ಅಕ್ರಮ – ಕೈ ನಾಯಕರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ: ಅಶ್ವಥ್ ನಾರಾಯಣ

ಬೆಂಗಳೂರು: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ತಮ್ಮ ಸಹೋದರ ಶಾಮೀಲು ಆರೋಪ ವಿಚಾರವಾಗಿ ಕಾಂಗ್ರೆಸ್ ನಾಯಕರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಆರೋಪವನ್ನು ಅಲ್ಲಗಳೆದಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಎಸ್‍ಐ ನೇಮಕಾತಿ ವಿಚಾರದಲ್ಲಿ ಒಬ್ಬನೇ ಒಬ್ಬ ವ್ಯಕ್ತಿಗೂ ಯಾವುದೇ ಶಿಫಾರಸು, ನೆರವು ಕೊಡುವ ಬಗ್ಗೆ ನಾನು ಹೇಳಿಲ್ಲ. ಈ ಆರೋಪ ಮಾಡಿರುವವರು ಸ್ಪಷ್ಟತೆ ಕೊಡಲಿ. ಇರಬಹುದು, ಮಾಡಿರಬಹುದು, ಎಂದು ಹೇಳಿಕೆ ಕೊಡುವವರು ಮೊದಲು ಸ್ಪಷ್ಟವಾಗಿ ತಿಳಿಸಲಿ. ಮಸಿ ಬಳಿಯಲು ಹೇಳೋದು ಬೇಡ. ಸಂಪೂರ್ಣವಾಗಿ ದುರುದ್ದೇಶದ ಹೇಳಿಕೆ ಕೊಟ್ಟಿದ್ದಾರೆ. ಇದು ನಿರಾಧಾರ ಹೇಳಿಕೆ, ಸುಳ್ಳು ಹೇಳಿಕೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಈಗ ಸಿಕ್ಕವರು ಕಿಂಗ್‌ಪಿನ್‌ಗಳಲ್ಲ, ಗೃಹ ಸಚಿವರ ಮೇಲೆಯೇ ನನಗೆ ಅನುಮಾನ – ಪ್ರಿಯಾಂಕ್ ಖರ್ಗೆ

ನನ್ನ ರಾಜಕೀಯ ಬೆಳವಣಿಗೆ ಸಹಿಸದೇ ಸುಳ್ಳು ಆರೋಪ ಮಾಡಲಾಗಿದೆ. ತನಿಖೆ ವರದಿ ಬರಲಿ, ಉಪ್ಪು ತಿಂದೋನು ನೀರು ಕುಡಿದೇ ಕುಡೀತಾನೆ. ತನಿಖೆ ಪಾರದರ್ಶಕವಾಗಿ ನಡೀತಿದೆ. ಕಾಂಗ್ರೆಸ್‍ನವರು ಆಧಾರ ಸಹಿತ ಆರೋಪ ಮಾಡುತ್ತಿದ್ದಾರೆ. ನನಗೆ ಯಾರ ಜೊತೆಗೂ ಸಂಬಂಧ ಇಲ್ಲ. ದರ್ಶನ್ ಗೌಡ ಹೆಸರು ಈಗಲೇ ಕೇಳ್ತಿರೋದು. ನಾನು ಭ್ರಷ್ಟಾಚಾರ ಮಾಡಲು ಬಂದವನಲ್ಲ. ಶಿವಕುಮಾರ್ ಬಾಯಿಯಲ್ಲಿ ಹೇಳಿಕೆ ಬರುತ್ತೆ ಅಂದ್ರೆ ಅದರಲ್ಲಿ ದುರುದ್ದೇಶ ಇದೆ ಎಂದರ್ಥ. ಅಶ್ವಥ್ ನಾರಾಯಣ ಮುಖ್ಯಮಂತ್ರಿ ಆಗಿಬಿಡ್ತಾನೆ ಅನ್ನೋ ಭಯ ಇದೆ ಡಿಕೆಶಿಗೆ. ನಮ್ಮ ನಾಯಕತ್ವ, ಗುಣದ ಭಯ ಇರಲಿ ಅವರಿಗೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮದಲ್ಲಿ ಅಶ್ವಥ್ ನಾರಾಯಣ ಸಹೋದರನಿಗೆ ಲಿಂಕ್ : ಉಗ್ರಪ್ಪ ಆರೋಪ

 

Comments

Leave a Reply

Your email address will not be published. Required fields are marked *