ಮೂವರು ಉದ್ಭವ ಮೂರ್ತಿಗಳು ಚುನಾವಣೆ ಮುಗಿದ್ಮೇಲೆ ಮನೆಗೆ ಹೋಗ್ತಾರೆ: ಪ್ರಿಯಾಂಕ್ ಖರ್ಗೆ

– ರಾಜ್ಯ ಸರ್ಕಾರದ ಬಗ್ಗೆ ಪ್ರಧಾನಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಕಲಬುರಗಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ್ ಜಾಧವ್, ಮಾಲೀಕಯ್ಯ ಗುತ್ತೇದಾರ್ ಹಾಗೂ ಬಾಬುರಾವ್ ಚಿಂಚನಸೂರು ಉದ್ಭವ ಮೂರ್ತಿಗಳಾಗಿದ್ದು, ಚುನಾವಣೆ ಬಳಿಕ ಮನೆಗೆ ವಾಪಸ್ ಹೋಗ್ತಾರೆ ಎಂದು ಸಮಾಜಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕ ಉಮೇಶ್ ಜಾಧವ್, ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಈ ಮೂರು ಶಾಸಕರು ತ್ರಿಮೂರ್ತಿಗಳು ಒಂದು ರೀತಿ ಉದ್ಭವಮೂರ್ತಿಗಳ ಹಾಗೆ. ಈ ಚುನಾವಣೆ ಮುಗಿದ ನಂತರ ಉದ್ಭವ ಮೂರ್ತಿಗಳು ಪತನವಾಗ್ತಾರೆ ಎಂದಿದ್ದಾರೆ. ಹಾಗೆಯೇ ಚಿಂಚೋಳಿಯಲ್ಲಿ ಯಾವ ಪ್ರೈವೇಟ್ ಲಿಮಿಟೆಡ್ ಕಂಪನಿಯಿದೆ ಗೊತ್ತಿಲ್ವಾ ಎಂದು ಉಮೇಶ್ ಜಾಧವ್ ಅವರಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಜಾಧವ್ ಅವರಿಗೆ ಬಿಜೆಪಿಯಲ್ಲಿ ದೊಡ್ಡ ಅವಮಾನ ಆಗಿದೆ. ಮೋದಿ ಕಲಬುರಗಿಯಲ್ಲಿ ಭಾಷಣ ಮಾಡಿದಾಗ ಜಾಧವ್ ಹೆಸರನ್ನಾದರು ಹೇಳಿದ್ದಾರಾ? ಹಾಗಾದರೇ ಅವರಿಗೆ ಏನು ಮರ್ಯಾದೆ ಉಳಿಯಿತು? ಬಿಜೆಪಿಯವರು ಲೋಕಸಭೆಗೆ ಜಾಧವ್ ಹೆಸರು ಘೋಷಿಸಿಲ್ಲ. ಜಾಧವ್ ಅವರೇ ಸ್ವಯಂ ಘೋಷಿತ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಮಾತಾಡಿದ್ದಾರೆ. ಜಾಧವ್ ಸೇರಿದಂತೆ ಯಾರೇ ಸ್ಪರ್ಧೆ ಮಾಡಿದರೂ ನಮಗೆ ಚುನಾವಣೆ ಮಾಡೋದು ಗೊತ್ತು. ಹಿಂದೆ ಎಂ.ವೈ.ಪಾಟೀಲ್‍ಗೆ ಕೈಕೊಟ್ಟಂತೆ ಬಿಜೆಪಿ ಜಾಧವಗೂ ಕೈಕೊಡಬಹುದು. ಕೈಕೊಡೋ ಗುಣ ಬಿಜೆಪಿ ಸ್ವಭಾವದಲ್ಲಿಯೇ ಇದೆ ಎಂದು ಕಿಡಿಕಾರಿದ್ದಾರೆ.

ಕೇಂದ್ರದ ಯೋಜನೆಗಳು ರೈತರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಅಡ್ಡಗೋಡೆ ಎಂಬ ಮೋದಿ ಹೇಳಿಕೆಗೆ ಆಕ್ರೋಶ ವ್ಯಕ್ತಿಪಡಿಸಿದ್ದಾರೆ. ಈ ರೀತಿ ಹೇಳಿಕೆ ನೀಡಲು ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಚಿಕೆಯಾಗಬೇಕು. ನಿಜವಾಗಿ ರೈತರ ಪರವಾಗಿ ಮೋದಿ ಏನು ಕೆಲಸ ಮಾಡಿದ್ದಾರೆ? ಸಾಲ ಮನ್ನಾ ಬಗ್ಗೆ ಎಷ್ಟೇ ಒತ್ತಡ ಇದ್ದರೂ ಕ್ರಮ ತೆಗೆದುಕೊಂಡಿಲ್ಲ. ಸ್ವತಃ ನರೇಂದ್ರ ಮೋದಿ ಆರ್.ಎಸ್‍.ಎಸ್ ಕೈಗೊಂಬೆಯಾಗಿದ್ದಾರೆ  ಎಂದು ಕರ್ನಾಟಕದ ಸಿಎಂ ರಿಮೋಟ್ ಕಂಟ್ರೋಲ್ ಸಿಎಂ ಎಂಬ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *