ಲೈಂಗಿಕ ಕಿರುಕುಳ ಆರೋಪ ಮಾಡಿದ್ದಕ್ಕೆ ಶಾಲೆಗೆ ಬರಬೇಡ ಎಂದ ಪ್ರಿನ್ಸಿಪಾಲ್..!

ಲಕ್ನೋ: ಯುವಕನೊಬ್ಬನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಕ್ಕೆ ಶಾಲೆಗೆ ಬರಬೇಡ ಎಂದು ಕಾಲೇಜು ಪ್ರಾಂಶುಪಾಲ ಹೇಳಿರುವ ಪ್ರಕರಣವೊಂದು ಉತ್ತರಪ್ರದೇಶದ ಖುಷಿನಗರ್ ಜಿಲ್ಲೆಯಲ್ಲಿ ನಡೆದಿದೆ.

ವಿದ್ಯಾರ್ಥಿನಿ ಗೋರಖ್ ಪುರದ ಮಹಾತ್ಮಗಾಂಧಿ ಇಂಟರ್ ಕಾಲೇಜಿನಲ್ಲಿ 11ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕಾಲೇಜಿನ ಶಿಸ್ತು ಪಾಲಿಸಿಲ್ಲ ಎಂದು ಆರೋಪಿಸಿ ಕಾಲೇಜಿನ ಪ್ರಾಂಶುಪಾಲ ಸಿಬಿ ಸಿಂಗ್ ಆಕೆಯನ್ನು ಅಮಾನತು ಮಾಡಿದ್ದಾರೆ.

ನೀನು ಕಾಲೇಜಿನ ಶಿಸ್ತನ್ನು ಪಾಲಿಸಿಲ್ಲ. ಇದರಿಂದ ಶಾಲೆಗೆ ಧಕ್ಕೆಯಾಗಿದೆ. ಅಲ್ಲದೇ ನಿನ್ನಿಂದ ಕಾಲೇಜಿಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ನಿನ್ನನ್ನು ಶಾಲೆಯಿಂದ ವಜಾ ಮಾಡುತ್ತಿರುವುದಾಗಿ ಆಕೆಗೆ ವರ್ಗಾವಣೆ ಪತ್ರ ಪಡೆದುಕೊಳ್ಳುವಂತೆ ಪ್ರಾಂಶುಪಾಲರು ಸೂಚಿಸಿದ್ದಾರೆ ಅಂತ ವಿದ್ಯಾರ್ಥಿನಿ ಬೇಸರ ವ್ಯಕ್ತಪಡಿಸಿದ್ದಾಳೆ.

ಆದ್ರೆ ಈ ಬಗ್ಗೆ ಸಮರ್ಥನೆ ನೀಡಿರುವ ಪ್ರಿನ್ಸಿಪಾಲ್, ‘ವಿದ್ಯಾರ್ಥಿನಿ ತರಗತಿ ಮುಗಿಯುವ ಮೊದಲೇ ಶಾಲೆಯಿಂದ ಹೋಗಿದ್ದಾಳೆ. ಈ ಮೂಲಕ ಶಾಲೆಯ ಅಶಿಸ್ತಿಗೆ ಕಾರಣಳಾಗಿದ್ದಾಳೆ. ಆದ್ದರಿಂದ ಆಕೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಗುರುವಾರ 25 ವರ್ಷದ ಯುವಕನೊಬ್ಬ ವಿದ್ಯಾರ್ಥಿನಿ ತನ್ನ ಕಾಲೇಜು ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಆಕೆಯನ್ನು ದಾರಿಯಲ್ಲಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಆತಂಕಗೊಂಡ ವಿದ್ಯಾರ್ಥಿನಿ ಆತನಿಗೆ ತನ್ನ ಚಪ್ಪಲಿಯಿಂದ ಗೂಸಾ ಕೊಟ್ಟಿದ್ದಾಳೆ. ಬಳಿಕ ಯುವಕನೊಬ್ಬ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ.  ವಿದ್ಯಾರ್ಥಿನಿಯ ದೂರು ಸ್ವೀಕರಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲ ಇದೀಗ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಹೊರ ಹಾಕಿದ್ದಾನೆ ಎನ್ನಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *