ಕೊರೊನಾ ಭೀತಿ- ಗುರುವಾರ ರಾತ್ರಿ 8ಕ್ಕೆ ಪ್ರಧಾನಿ ಮೋದಿ ಭಾಷಣ

ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಕೋಲಾಹಲ ಸೃಷ್ಟಿಸಿದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ 147ಕ್ಕೆ ಹೆಚ್ಚಿದೆ. ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುತ್ತಲೇ ಇದ್ದರು. ಇದೀಗ ನೇರವಾಗಿ ಮಾತನಾಡಲು ಪ್ರಧಾನಿ ಮುಂದಾಗಿದ್ದಾರೆ.

ಮಾರ್ಚ್ 19ರಂದು ರಾತ್ರಿ 8ಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೊರೊನಾ ವೈರಸ್ ಹರಡುವಿಕೆ ಹಾಗೂ ತಡೆಗಟ್ಟುವ ಕ್ರಮದ ಬಗ್ಗೆ ಮಾತನಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇಷ್ಟು ದಿನ ಟ್ವಟ್ಟರ್ ಮೂಲಕವೇ ಜಾಗೃತಿ ಮೂಡಿಸುತ್ತಿದ್ದ ಮೋದಿ, ಸಾಮೂಹಿಕ ಹೋಳಿಯಿಂದಲೂ ದೂರ ಉಳಿದಿದ್ದರು. ಈ ಮೂಲಕ ಒಂದೇ ಕಡೆ ಹೆಚ್ಚು ಜನ ಸೇರಬಾರದು ಎಂಬ ಸಂದೇಶ ಸಾರಿದ್ದರು.

ಭಾರತದಲ್ಲಿ ಕೊರೋನಾ ಸೋಂಕು ವೇಗವಾಗಿ ಹಬ್ಬುತ್ತಿದೆ. ಲಡಾಖ್‍ನಲ್ಲಿ ಸ್ಕೌಟ್ ರೆಜಿಮೆಂಟ್‍ನ ಯೋಧರೊಬ್ಬರಿಗೆ ವೈರಸ್ ಸೋಕಿದೆ. ಯೋಧನ ಜೊತೆ ಸಂರ್ಕದಲ್ಲಿದ್ದ ಎಲ್ಲಾ ಯೋಧರಿಗೂ ಗೃಹನಿರ್ಬಂಧ ವಿಧಿಸಲಾಗಿದೆ. ಪಂಜಾಬ್‍ನ ಲೂಧಿಯಾನದಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದ 167 ಮಂದಿ ನಾಪತ್ತೆಯಾಗಿರೋದು ಆತಂಕಕ್ಕೆ ಕಾರಣ ಆಗಿದೆ. ಪ್ರಸಿದ್ದ ವೈಷ್ಣೋದೇವಿ ಯಾತ್ರೆ ಬಂದ್ ಮಾಡಲಾಗಿದೆ. ಕಾಶಿಯಲ್ಲಿ ಗಂಗಾರತಿ ರದ್ದು ಮಾಡಲಾಗಿದೆ. ತಿರುಪತಿ ತಿರುಮಲದ ಕಲ್ಯಾಣಿಯಲ್ಲಿ ಸ್ನಾನ ಮಾಡೋದನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ಸೌದಿ ಅರೇಬಿಯಾಗೆ ಹೋಗಿ ಬಂದಿದ್ದ ಕೇಂದ್ರದ ಮಾಜಿ ಮಂತ್ರಿ ಸುರೇಶ್ ಪ್ರಭು ಸ್ವಯಂ ಗೃಹ ನಿರ್ಬಂಧ ವಿಧಿಸಿಕೊಂಡಿದ್ದಾರೆ. ನಟಿ ಆಲಿಯಾ ಭಟ್ ಕೂಡ ಮನೆಗೆ ಸೀಮಿತ ಆಗಿದ್ದಾರೆ.

ದೇಶದ ಗಡಿಗಳನ್ನು ಮುಚ್ಚಲಾಗಿದೆ. ವಿದೇಶಗಳಿಂದ ಬಂದಿಳಿಯುವ ಮಂದಿಯಲ್ಲಿ ತೀವ್ರ ನಿಗಾವಹಿಸಲಾಗಿದೆ. ಪ್ರಮುಖ ನಗರಗಳು ಹೆಚ್ಚು ಕಡಿಮೆ ಸ್ತಬ್ಧವಾಗಿವೆ. ರಸ್ತೆಗೆ ಇಳಿಯುವ ಮಂದಿ ಮಾಸ್ಕ್ ಧರಿಸೋ ಪ್ರಮಾಣ ಹೆಚ್ಚುತ್ತಿದೆ. ಆದರೂ ಎಲ್ಲರ ನಿರೀಕ್ಷೆ ಮೀರಿ ಕೊರೋನಾ ಸೋಂಕು ವೇಗವಾಗಿ ಹಬ್ಬುತ್ತಿದೆ. ನಿನ್ನೆ 137 ಇದ್ದ ಸೋಂಕಿತರ ಸಂಖ್ಯೆ ಇಂದು 158ಕ್ಕೆ ಬಂದು ತಲುಪಿದೆ. ಅಂದ್ರೆ ನಿನ್ನೆಗೂ ಇವತ್ತಿಗೂ ವ್ಯತ್ಯಾಸ 20. ಇದು ಮುಂದಿನ ದಿನಗಳ ತೀವ್ರ ಸ್ವರೂಪ ಪಡೆಯುತ್ತಿದೆ. ಏಪ್ರಿಲ್ 15ರ ಹೊತ್ತಿಗೆ, ಈ ಸಂಖ್ಯೆ 10 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ಐಸಿಎಂಆರ್‍ನ ವೈರಾಣು ವಿಭಾಗದ ಮಾಜಿ ಮುಖ್ಯಸ್ಥರಾದ ಡಾ.ಜಾಕೋಬ್ ಜಾನ್ ವ್ಯಕ್ತಪಡಿಸ್ತಾರೆ. ಜೊತೆಗೆ ಹಿಮಪಾತದಂತೆ ಕೊರೋನಾ ಹರಡುತ್ತಿದೆ, ದಿನ ಕಳೆದಂತೆ ಕಡಿಮೆ ಆಗೋದು ಕಷ್ಟ. ಮುಂದಿನ ದಿನಗಳಲ್ಲಿ ಭಾರತ ಕೊರೋನಾ ವೈರಸ್ ಹಾಟ್ ಸ್ಪಾಟ್ ಆಗಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

Comments

Leave a Reply

Your email address will not be published. Required fields are marked *