ಮೋದಿ ಹುಟ್ಟುಹಬ್ಬ – ಬೆಂಬಲಿಗರೊಂದಿಗೆ ಐಸಿಯುಗೆ ನುಗ್ಗಿ ರೋಗಿಗಳಿಗೆ ಹಣ್ಣು ವಿತರಿಸಿದ ಸಚಿವ ಪ್ರಭು ಚೌವ್ಹಾಣ್

ಬೀದರ್: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಅದೇ ರೀತಿ ರೋಗಿಗಳಿಗೆ ಹಣ್ಣು ಹಂಚುವ ಸಂದರ್ಭದಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಎಡವಟ್ಟು ಮಾಡಿದ್ದು, ಹತ್ತಾರು ಬೆಂಬಲಿಗರೊಂದಿಗೆ ತುರ್ತುನಿಗಾ ಘಟಕ(ಐಸಿಯು)ಕ್ಕೆ ನುಗ್ಗಿ ಹಣ್ಣು ಹಂಚಿದ್ದಾರೆ.

ಮೋದಿ ಜನ್ಮ ದಿನ ಆಚರಣೆ ಅಂಗವಾಗಿ ಇಂದು ಬೀದರ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ಹಂಚುತ್ತಿದ್ದರು. ಈ ವೇಳೆ ಕೇವಲ ವಾರ್ಡ್‍ನಲ್ಲಿರುವ ರೋಗಿಗಳಿಗೆ ಹಣ್ಣುಗಳನ್ನು ಹಂಚದೆ, ಐಸಿಯುನಲ್ಲಿರುವ ರೋಗಿಗಳಿಗೂ ಹಣ್ಣುಗಳನ್ನು ಹಂಚಿದ್ದು, ಈ ಮೂಲಕ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ರೋಗಿಗಳಿಗೆ ಸಚಿವರು ತೊಂದರೆ ಕೊಟ್ಟಿದ್ದಾರೆ.

ಸಚಿವರು ಹಾಗೂ ಅವರೊಂದಿಗೆ 50ಕ್ಕೂ ಹೆಚ್ಚು ಬೆಂಬಲಿಗರು ಶೂ ಹಾಕಿಕೊಂಡೇ ಐಸಿಯುಗೆ ನುಗ್ಗಿದ್ದು, ತುರ್ತುನಿಗಾ ಘಟಕಕ್ಕೆ ಒಂದೇ ಸಮಯಕ್ಕೆ ಹತ್ತಾರು ಮಂದಿ ನುಗ್ಗಿದ್ದರಿಂದ ರೋಗಿಗಳು ತೊಂದರೆ ಅನುಭವಿಸುವಂತಾಯಿತು. ಐಸಿಯುನಲ್ಲಿರುವ ರೋಗಿಗಳನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ, ಒಂದು ವೇಳೆ ಹೋದರೂ ಸಹ ಒಬ್ಬಿಬ್ಬರು ಮಾತ್ರ ತೆರಳಬೇಕು. ಆದರೆ, ಸಚಿವರು ಇದಾವುದನ್ನೂ ಲೆಕ್ಕಿಸದೆ ಹತ್ತಾರು ಬೆಂಬಲಿಗರೊಂದಿಗೆ ನುಗ್ಗಿದ್ದಾರೆ.

ಈ ಮೂಲಕ ಆಸ್ಪತ್ರೆಯ ನಿಯಮವನ್ನು ಗಾಳಿಗೆ ತೂರಿದ್ದು, ಸಾಮಾನ್ಯ ವಾರ್ಡ್‍ನಲ್ಲಿ ದಾಖಲಾಗಿರುವ ರೋಗಿಗಳಿಗೆ ಮಾತ್ರ ಹಣ್ಣು ವಿತರಣೆ ಮಾಡದೆ, ಐಸಿಯುಗೂ ನುಗ್ಗಿ ವೈದ್ಯರಿಗೂ ಸಹ ಇರುಸುಮುರುಸು ಉಂಟುಮಾಡಿದ್ದಾರೆ.

Comments

Leave a Reply

Your email address will not be published. Required fields are marked *