ದೇಶ ರಕ್ಷಣೆಗೈದವರಿಗೆ ಮೊದಲ ಗೌರವ – ಹುತಾತ್ಮ ಯೋಧರ ಮಕ್ಕಳ ವಿದ್ಯಾರ್ಥಿ ವೇತನ ಏರಿಕೆ

ನವದೆಹಲಿ: ದೇಶ ರಕ್ಷಣೆಗೈದವರಿಗೆ ಪ್ರಧಾನಿ ಮೋದಿ ಸರ್ಕಾರ ತನ್ನ ಮೊದಲ ಕ್ಯಾಬಿನೆಟ್‍ನಲ್ಲಿ ಗೌರವ ಸಲ್ಲಿಸಿದೆ. ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಯೋಜನೆ(ಪಿಎಂಎಸ್‍ಎಸ್) ಮೊತ್ತವನ್ನು ಏರಿಕೆ ಮಾಡಲಾಗಿದೆ.

ಎನ್‍ಡಿಎ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆ ಇಂದು ನಡೆದಿದ್ದು, ರಾಷ್ಟ್ರೀಯ ರಕ್ಷಣಾ ನಿಧಿಯಿಂದ ನೀಡಲಾಗುತ್ತಿದ್ದ ಪಿಎಂಎಸ್‍ಎಸ್ ಮೊತ್ತವನ್ನು ಏರಿಕೆ ಮಾಡಿರುವುದಾಗಿ ಸರ್ಕಾರ ತಿಳಿಸಿದೆ. ನಮ್ಮ ದೇಶವನ್ನು ಯಾರು ರಕ್ಷಣೆ ಮಾಡುತ್ತಾರೋ ಅವರಿಗೆ ಗೌರವ ಸಲ್ಲಿಸಲು ಮೊದಲ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಇಲ್ಲಿಯವರೆಗೆ ಈ ವಿದ್ಯಾರ್ಥಿವೇತನ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಯೋಧರ ಮಕ್ಕಳಿಗೆ ಮಾತ್ರ ಲಭ್ಯವಾಗುತಿತ್ತು. ಈಗ ಈ ವಿದ್ಯಾರ್ಥಿ ವೇತನವನ್ನು ರಾಜ್ಯಗಳಿಗೆ ವಿಸ್ತರಿಸಿದ್ದಾರೆ. ರಾಜ್ಯದಲ್ಲಿರುವ ಪೊಲೀಸರಿಗೆ ವಿಸ್ತರಿಸಲಾಗಿದ್ದು, ನಕ್ಸಲ್/ಉಗ್ರರ ಕಾರ್ಯಾಚರಣೆ ವೇಳೆ ಮೃತಪಟ್ಟ ಪೊಲೀಸರ ಮಕ್ಕಳಿಗೆ ಇನ್ನು ಮುಂದೆ ಈ ವಿದ್ಯಾರ್ಥಿವೇತನ ಸಿಗಲಿದೆ.

ಎಷ್ಟು ಏರಿಕೆ?
ಹುಡುಗರಿಗೆ ಶೇ.25 ರಷ್ಟು ಏರಿಕೆ ಆಗಿದ್ದರೆ ಹುಡುಗಿಯರಿಗೆ ಮೊತ್ತ ಶೇ.33 ರಷ್ಟು ಏರಿಕೆ ಮಾಡಲಾಗಿದೆ. ಇಲ್ಲಿಯವರಗೆ ಹುಡುಗರಿಗೆ ಪ್ರತಿ ತಿಂಗಳು 2 ಸಾವಿರ ರೂ. ವಿದ್ಯಾರ್ಥಿ ವೇತನ ಸಿಗುತ್ತಿದ್ದರೆ ಈಗ ಈ ಮೊತ್ತ 2,500ಕ್ಕೆ ಏರಿಕೆಯಾಗಿದೆ. ಹುಡುಗಿಯರಿಗೆ ಈ ಮೊದಲು 2,250 ರೂ. ವಿದ್ಯಾರ್ಥಿ ವೇತನ ಸಿಕ್ಕಿದ್ದರೆ ಈಗ 3,000 ರೂ.ಗೆ ಏರಿಕೆಯಾಗಿದೆ.

ಈ ವಿದ್ಯಾರ್ಥಿವೇತನ ಮೆಡಿಕಲ್, ಡೆಂಟಲ್, ಪಶುವೈದ್ಯ, ಎಂಜಿನಿಯರಿಂಗ್, ಎಂಬಿಎ, ಎಂಸಿಎ ಮತ್ತು ಯುಜಿಸಿ, ಎಐಸಿಟಿಇ ಅಡಿ ಬರುವ ಪದವಿಗಳಿಗೆ ಅನ್ವಯವಾಗುತ್ತದೆ.

ಮುಂಬೈ ದಾಳಿಯಲ್ಲಿ ಹುತಾತ್ಮರಾಗಿದ್ದ ಮುಂಬೈ ಪೊಲೀಸ್ ಅಧಿಕಾರಿ ತುಕಾರಂ ಒಂಬಳೆಯವರ ಮಕ್ಕಳು ಈ ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದರು.

Comments

Leave a Reply

Your email address will not be published. Required fields are marked *