ಗಾಡಿಗೆ ಬೀಗ ಹಾಕಿದ್ದಾರೆ: ಸಚಿವರ ಮುಂದೆ ಬೀಗಿದ ಪುಟಾಣಿಗಳು

ಬೆಂಗಳೂರು: ಗಾಡಿಗೆ ಬೀಗ ಹಾಕಿದ್ದಾರೆ ಎಂದು ಪುಟಾಣಿಗಳು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಮುಂದೆ ಬೀಗಿದ್ದಾರೆ.

ಮೂವರು ಪುಟಾಣಿಗಳ ಜೊತೆಗೆ ಆತ್ಮೀಯ ಸಂಭಾಷಣೆ ನಡೆಸಿದ ಸನ್ನಿವೇಶವನ್ನು ಸಚಿವ ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರವಾಗಿ ಸಚಿವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಟ್ವೀಟ್ ಮಾಡಿರುವ ಸಚಿವರು, ಬಿಜೆಪಿ ಸಾರ್ವಜನಿಕ ಸಭೆಯಿಂದ ಮರಳಿ ನಡೆದು ಬರುತ್ತಿದ್ದಾಗ ತಮ್ಮ ಮನೆಯಾಚೆ ತಳ್ಳುವ ಗಾಡಿಯ ಮೇಲೆ ಕುಳಿತು ಖುಷಿಯಾಗಿ ಬರೆಯುತ್ತಿದ್ದ ಶರಣ್ಯಾ, ದಿವ್ಯಾ ಮತ್ತು ಚಿತ್ರಾ ಸಿಕ್ಕಿದ್ದರು. ತಳ್ಳಿಕೊಂಡು ಹೋಗಿ ಬಿಡ್ಲಾ ಎಂದು ಕೇಳಿದ್ದಕ್ಕೆ ‘ನಮ್ಮಪ್ಪ ಗಾಡಿಗೆ ಬೀಗ ಹಾಕಿದ್ದಾರೆ’ ಎಂದು ಬೀಗಿದರು ಅಂತ ಬರೆದುಕೊಂಡಿದ್ದಾರೆ.

ಜನ ಸ್ನೇಹಿ ಸುರೇಶ್ ಕುಮಾರ್ ಅವರಿಗೆ ಅಭಿನಂದನೆಗಳು. ಶ್ರೀಮಂತಿಕೆ, ಆಡಂಬರ, ಅಧಿಕಾರದ ಹಿಂದೆಯೇ ಬಿದ್ದಿರುವ ರಾಜಕಾರಣಿಗಳ ನಡುವೆ ಸರಳ ಸಜ್ಜನರಾದ ನಿಮಗೆ ಬಿಜೆಪಿ ಸೂಕ್ತವಾದ ಸ್ಥಾನಮಾನ ಕೊಡುವುದರಲ್ಲಿ ಎಡವಿದೆ. ನೀವು ಇರುವುದರಲ್ಲೇ ನಾಜಿರ್ ಸಾಬ್ ಬಹುಕಾಲ ನೆನಪಿನಲ್ಲಿ ಉಳಿಯುವ ಕಾರ್ಯಗಳನ್ನು ಮಾಡಿ ಎಂದು ನೆಟ್ಟಿಗರೊಬ್ಬರು ರಿಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬರು ಕಮೆಂಟ್ ಮಾಡಿ, ಸರ್ ರಾಜಕಾರಣಿ ಅಂದ್ರೆ ದುಡ್ಡು, ಧಿಮಾಕು, ದರ್ಪ ನೆನಪಾಗುತ್ತದೆ. ಈ ರೀತಿ ಜನರ ಮಧ್ಯೆ ಬೆರೆತು ಅವರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿ ಪರಿಹಾರ ನೀಡುವ ನಿಮ್ಮಂತ ರಾಜಕಾರಣಿಗಳು ಕೂಡ ಇದ್ದಾರೆ ಅಂದ್ರೆ ತುಂಬಾ ಸಂತೋಷವಾಗುತ್ತದೆ. ಇದೇ ರೀತಿ ರಾಜಕೀಯದಲ್ಲಿ ಮುಂದುವರಿಯಿರಿ ಎಂದು ಹಾರೈಸಿದ್ದಾರೆ.

Comments

Leave a Reply

Your email address will not be published. Required fields are marked *