ಗರ್ಭದಲ್ಲಿರೋ ಕಂದಮ್ಮನಿಗೂ ಕಾಡ್ತಿದೆ ‘ಗುಂಡಿಭೂತ’ದ ಭಯ

– ಗುಂಡಿಗೆ ಹೆದರಿ ಮನೆಯಲ್ಲಿ ಕೂತ ಗರ್ಭಿಣಿ

ಬೆಂಗಳೂರು: ಸಿಲಿಕಾನ್ ಸಿಟಿಯ ದೊಡ್ಡನಕುಂದಿಯ ಕುಂದೇನಹಳ್ಳಿ ರಸ್ತೆಯಲ್ಲಿ ಯಮರೂಪಿ ಗುಂಡಿಗಳು ಗರ್ಭಿಣಿಯರನ್ನು ರಸ್ತೆಗೆ ಬಾರದಂತೆ ಹೆದರಿಸಿದೆ. ಈ ರಸ್ತೆಯಲ್ಲಿ ಸಂಚರಿಸಿದರೆ ಗರ್ಭಪಾತವಾಗುವುದು ಎಂದು ವೈದ್ಯರ ಎಚ್ಚರಿಕೆ ನೀಡಿದ್ದಾರೆ.

ಮಗು ಪ್ರತಿ ತಾಯಿ ಕನಸು. ಮಗುವಿಗೆ ಕೊಂಚ ನೋವಾದರು ತಾಯಿ ಜೀವ ಸಹಿಸಲ್ಲ. ಅದರಲ್ಲೂ ಹೊಟ್ಟೆಯಲ್ಲಿರುವ ಮಗುವನ್ನ ತಾಯಿ ಕಣ್ಣಿನ ರೆಪ್ಪೆಯಂತೆ ಕಾಯ್ತಾಳೆ. ಹೀಗಿರುವಾಗ ಮಾರತಹಳ್ಳಿ ಸಮೀಪದ ದೊಡ್ಡನೆಕುಂದಿ ವಾರ್ಡ್‍ನ ಕುಂದೇನಹಳ್ಳಿ ಗೇಟ್ ಬಳಿ ರಸ್ತೆಯಲ್ಲಿ ಓಡಾಡಿದರೆ ನಿಮ್ಮ ಮಗು ಶಾಶ್ವತವಾಗಿ ಕಣ್ಣು ಬಿಡಲ್ಲ ಎಂದು ವೈದ್ಯರು ಬ್ಯಾಂಕ್ ಉದ್ಯೋಗಿ ಕಲ್ಯಾಣಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಗರ್ಭದಲ್ಲಿರೋ ಕಂದಮ್ಮನಿಗಾಗಿ ತಾಯಿ ಈಗ ಈ ರಸ್ತೆಯಲ್ಲಿ ಓಡಾಡುವುದನ್ನೇ ಬಿಟ್ಟು ಮನೆಯಲ್ಲಿಯೇ ಇದ್ದಾರೆ. ಇದನ್ನೂ ಓದಿ:ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣುಮಗಳ ಪ್ರಾಣ ಹೋಯ್ತು – ಸಿಟಿ ರವಿಗೆ ಜನಸಾಮಾನ್ಯರ ತರಾಟೆ

ಕಲ್ಯಾಣಿ ಅವರು ಸದ್ಯ 7 ತಿಂಗಳ ಗರ್ಭಿಣಿ. ಇವರಿಗೆ 2 ತಿಂಗಳು ಇರುವಾಗ ಈ ರಸ್ತೆಯಲ್ಲಿ ಓಡಾಡಿದ್ದರು. ಸಂಚರಿಸುವಾಗ ಗುಂಡಿಯಲ್ಲಿ ವಾಹನ ಇಳಿದಿದ್ದರಿಂದ ತೀವ್ರ ರಕ್ತಸ್ರಾವವಾಗಿತ್ತು. ವೈದ್ಯರ ಬಳಿ ಹೋದಾಗ ಇಂಥ ಗುಂಡಿಯಲ್ಲಿ ವಾಹನ ಇಳಿಸಿದ್ದರಿಂದಲೇ ಈ ಅನಾಹುತವಾಗಿದೆ. ಮಗುವಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಅಂತ ಕೈಚೆಲ್ಲಿದ್ದರು. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರಿಂದ ಮಗು ಬದುಕಿದೆ. ಅಂದಿನಿಂದ ಈ ರಸ್ತೆಯಲ್ಲಿ ಕಲ್ಯಾಣಿ ಅವರು ಓಡಾಡೋದನ್ನೇ ಬಿಟ್ಟಿದ್ದಾರೆ. ಇದನ್ನೂ ಓದಿ:ಇನ್ನಾದ್ರೂ ರಸ್ತೆ ಸರಿ ಮಾಡ್ರಪ್ಪ – ಹದಗೆಟ್ಟ ರಸ್ತೆ ದುಸ್ಥಿತಿ ಬಗ್ಗೆ ದಂಪತಿ, ಮಗನ ಫೋಟೋಶೂಟ್

ಈ ರಸ್ತೆಯಲ್ಲಿ 2 ಸಾವಿರ ಅರ್ಪಾರ್ಟ್ ಮೆಂಟ್ ನಿವಾಸಿಗಳಿದ್ದು, 2 ಖಾಸಗಿ ಶಾಲೆಗಳಿವೆ. ಈ ರಸ್ತೆಗೆ ಪರ್ಯಾಯ ವ್ಯವಸ್ಥೆಯೇ ಇಲ್ಲ. ಆದರೆ ಸ್ಥಳೀಯ ಶಾಸಕ ಅರವಿಂದ್ ಲಿಂಬಾವಳಿ, ಕಾರ್ಪೋರೇಟರ್ ಶ್ವೇತಾ ವಿಜಯಕುಮಾರ್ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಲ್ಲದೆ ಈ ರಸ್ತೆಯ ಒಂದು ಭಾಗ ಖಾಸಗಿಯವರಿಗೆ ಸೇರಿರುವುದರಿಂದ ಈ ರೀತಿ ರಸ್ತೆ ಸರಿಪಡಿಸಲು ಬಿಬಿಎಂಪಿ ವಿಳಂಬನೀತಿ ಮಾಡುತ್ತಿದೆ ಅನ್ನೋದು ಸ್ಥಳೀಯರ ಆಕ್ರೋಶವಾಗಿದೆ. ಇದನ್ನೂ ಓದಿ: ಕಿತ್ತುಹೋಗಿರುವ ರಸ್ತೆ, ಪ್ರತಿನಿತ್ಯ ಅಪಘಾತ- ರಾಷ್ಟ್ರೀಯ ಹೆದ್ದಾರಿ ದುಸ್ಥಿತಿಗೆ ಸವಾರರು ಸುಸ್ತು

ಖಾಸಗಿ ಹಾಗೂ ಸರ್ಕಾರಿ ಸಿಬ್ಬಂದಿಯ ಕಿತ್ತಾಟದ ಮಧ್ಯೆ ಜನ ಈ ಗುಂಡಿಗೆ ಭಯಬಿದ್ದು ಬದುಕು ಸಾಗಿಸುವಂತಾಗಿದೆ. ಹೊಟ್ಟೆಯೊಳಗಿನ ಕಂದಮ್ಮನಿಗೆ ಯಮನಂತೆ ಕಾಡುವ ಈ ಗುಂಡಿಗೆ ಬಿಬಿಎಂಪಿ ಇನ್ನಾದರೂ ಮುಕ್ತಿ ಕೊಡುತ್ತಾ ನೋಡಬೇಕಿದೆ.

Comments

Leave a Reply

Your email address will not be published. Required fields are marked *