ಕುಂಭ ಮೇಳ ಕಾಲ್ತುಳಿತದ ಹಿಂದೆ ಇದ್ಯಾ ಪಿತೂರಿ? – ಸಕ್ರಿಯವಾಗಿದ್ದ 16 ಸಾವಿರ ಮೊಬೈಲ್‌ಗಳ ಪೈಕಿ ಬಹುತೇಕ ಸ್ವಿಚ್‌ ಆಫ್‌!

ಪ್ರಯಾಗ್‌ರಾಜ್‌: ಮೌನಿ ಅಮಾವಾಸ್ಯೆಯಂದು ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ (Kumbh Stampede) ಪ್ರಕರಣದ ಹಿಂದೆ ದೊಡ್ಡ ಸಂಚು ಇದ್ಯಾ ಹೀಗೊಂದು ಶಂಕೆ ಈಗ ಎದ್ದಿದೆ.

ಹೌದು. ಜನವರಿ 29 ರಂದು ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಈಗ ತನಿಖೆ ಆರಂಭವಾಗಿದೆ. ತನಿಖೆಯ ಭಾಗವಾಗಿ ಕಾಲ್ತುಳಿತ ಸಂಭವಿಸಿದ ಸ್ಥಳದಲ್ಲಿ ಸಕ್ರಿಯವಾಗಿದ್ದ ಸುಮಾರು 16 ಸಾವಿರ ಮೊಬೈಲ್‌ ಫೋನ್‌ಗಳನ್ನು (Mobile Phone) ದತ್ತಾಂಶಗಳನ್ನು ವಿಶ್ಲೇಷಣೆ ಮಾಡಲಾಗುತ್ತಿದೆ.

ವಿಶ್ಲೇಷಣೆಯ ಸಂದರ್ಭದಲ್ಲಿ ಬಹುತೇಕ ಮೊಬೈಲ್‌ ಫೋನ್‌ಗಳು ಸ್ವಿಚ್‌ ಆಫ್‌ ಆಗಿರುವ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಈಗ ತನಿಖಾಧಿಕಾರಿಗಳು ಸ್ವಿಚ್‌ ಆಫ್‌ ಆಗಿರುವ ಮೊಬೈಲ್‌ ಸಂಖ್ಯೆಗಳ ಗ್ರಾಹಕರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಬಸಂತ ಪಂಚಮಿ – ಪ್ರಯಾಗ್‌ರಾಜ್‌ನಲ್ಲಿ ಸೋಮವಾರ 3 ಕೋಟಿ ಭಕ್ತರಿಂದ ಪವಿತ್ರ ಸ್ನಾನ

ಈಗ ಪೊಲೀಸ್‌ ಕಂಟ್ರೋಲ್‌ ರೂಮ್‌ನಲ್ಲಿ ಸಂಗ್ರಹಿಸಲಾದ ಸಿಸಿಟಿವಿ ದೃಶ್ಯಗಳಿಂದ ಮುಖ ಗುರುತಿಸುವಿಕೆ ಅಪ್ಲಿಕೇಶನ್ ಮೂಲಕ ಶಂಕಿತರನ್ನು ಗುರುತಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮೌನಿ ಅಮಾವಾಸ್ಯೆಯಂದು ಸ್ನಾನ ಮಾಡಲು ನೂಕು ನುಗ್ಗಲು ಉಂಟಾಗಿ ಸುಮಾರು 30 ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಜನಸಮೂಹವು ಬ್ಯಾರಿಕೇಡ್‌ಗಳನ್ನು ಹಾರಿ ಮುನ್ನುಗ್ಗಿದ್ದರಿಂದ ಈ ದುರಂತ ಸಂಭವಿಸಿತ್ತು.

ಯೋಗಿ ಅದಿತ್ಯನಾಥ್‌ ಸರ್ಕಾರ ಈ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮೂವರು ಸದಸ್ಯರ ನ್ಯಾಯಾಂಗ ಆಯೋಗವು ಶುಕ್ರವಾರ ಘಟನೆಯ ಸ್ಥಳಕ್ಕೆ ಭೇಟಿ ನೀಡಿತ್ತು. ಸಮಿತಿಯು ತನ್ನ ತನಿಖೆಯನ್ನು ಮುಗಿಸಿ ವರದಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವಿದೆ.

12 ವರ್ಷಗಳ ನಂತರ ನಡೆಯುತ್ತಿರುವ ಮಹಾ ಕುಂಭ ಮೇಳವು ಜನವರಿ 13 ರಂದು ಪ್ರಾರಂಭವಾಗಿದ್ದು ಫೆಬ್ರವರಿ 26 ರವರೆಗೆ ನಡೆಯಲಿದೆ. ಸುಮಾರು 40 ಕೋಟಿ ಭಕ್ತರು ಈ ಕುಂಭಮೇಳದಲ್ಲಿ ಭಾಗಿಯಾಗಬಹುದು ಎಂದು ಉತ್ತರಪ್ರದೇಶ ಸರ್ಕಾರ ಆಂದಾಜಿಸಿದೆ.