ನಾನು ಮತ್ತೆ ಬ್ಯಾಟಿಂಗ್ ಮಾಡದಂತೆ ಪ್ರಾರ್ಥಿಸುತ್ತೇನೆ: ಬಿಜೆಪಿ ಶಾಸಕ

– ಅಧಿಕಾರಿಗೆ ಬ್ಯಾಟ್‍ನಿಂದ ಹೊಡೆದಿದ್ದ ಶಾಸಕನಿಗೆ ಜಾಮೀನು

ಭೋಪಾಲ್: ನಾನು ಮತ್ತೆ ಬ್ಯಾಟಿಂಗ್ ಮಾಡದಂತೆ ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ಶಾಸಕ ಆಕಾಶ್ ವಿಜಯ್‍ವರ್ಗಿ ಅವರು, ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ಮಧ್ಯಪ್ರದೇಶದ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್‍ವರ್ಗಿಯ ಅವರ ಪುತ್ರ, ಇಂದೋರ್-3 ಶಾಸಕ ಆಕಾಶ್ ಅವರು ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗೆ ಬ್ಯಾಟ್‍ನಿಂದ ಹೊಡೆದು ಜೈಲಿಗೆ ಸೇರಿದ್ದರು. ಅವರಿಗೆ ಭೋಪಾಲದ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ನೀಡಿತ್ತು. ಇಂದು ಜೈಲಿನಿಂದ ಹೊರ ಬಂದಿದ್ದಾರೆ.

ಜೈಲಿನಿಂದ ಹೊರ ಬಂದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, ನಾನು ಜೈಲಿನಲ್ಲಿ ಒಳ್ಳೆಯ ರೀತಿಯಲ್ಲಿ ಕಾಲ ಕಳೆದಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಹಿತಾಸಕ್ತಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಆಕಾಶ್ ಅವರನ್ನು ಬೆಂಬಲಿಗರು ಅದ್ಧೂರಿಯಾಗಿ ಸ್ವಾಗತಿಸಿದರು. ಅಷ್ಟೇ ಅಲ್ಲದೆ ಪಕ್ಷದ ಕಚೇರಿ ಮುಂದೆ ಕುಣಿದು ಕುಪ್ಪಳಿಸಿದರು.

ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ್ದೇನೆ. ಘಟನೆಯ ಬಗ್ಗೆ ನಾನು ಮುಜುಗುರಕ್ಕೆ ಒಳಗಾಗುವುದಿಲ್ಲ. ಆದರೆ ಮತ್ತೆ ನಾನು ಬ್ಯಾಟಿಂಗ್ ಮಾಡದಂತೆ ಕಾಯುವಂತೆ ದೇವರಲ್ಲಿ ಪಾರ್ಥಿಸುತ್ತೇನೆ ಎಂದು ಹೇಳಿದರು.

ಶಾಸಕ ಆಕಾಶ್, ಸಾರ್ವಜನಿಕರು ಹಾಗೂ ಮಾಧ್ಯಮಗಳ ಮುಂದೆಯೇ ಅಧಿಕಾರಿಗೆ ಬ್ಯಾಟ್‍ನಿಂದ ಹೊಡೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಾಸಕರ ವರ್ತನೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದರೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಶಾಸಕರ ಬೆಂಬಲಕ್ಕೆ ನಿಂತಿದ್ದರು.

Comments

Leave a Reply

Your email address will not be published. Required fields are marked *