ಈ ಉದ್ದೇಶಕ್ಕಾಗಿ ಇನ್ಮುಂದೆ ಹಣ ಕೊಟ್ಟರೆ ಮಾತ್ರ ಕಾರ್ಯಕ್ರಮಕ್ಕೆ ಬರ್ತಾರಂತೆ ಪ್ರಥಮ್!

ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಪ್ರಖ್ಯಾತಿ ಪಡೆದುಕೊಂಡ ನಟ ಹಾಗೂ ನಿರ್ದೇಶಕ ಪ್ರಥಮ್ ಇನ್ಮುಂದೆ ಹಣ ಕೊಟ್ಟರಷ್ಟೇ ಕಾರ್ಯಕ್ರಮಗಳಿಗೆ ಬರುತ್ತೇನೆ ಎಂದು ಹೇಳಿದ್ದಾರೆ.

ಇನ್ಮುಂದೆ ಪ್ರಥಮ್ ಹಣ ಪಡೆಯದೇ ಯಾವುದೇ ಸಮಾರಂಭದಲ್ಲಿ ಭಾಗಿ ಆಗುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ. ಯಾಕೆಂದ್ರೆ ಮಂಗಳೂರಿನ ಬಳಿ ಇರುವ ಆಶ್ರಮಕ್ಕೆ ತಮಗೆ ಬರುವ ಹಣದಲ್ಲಿ ಅರ್ಧ ನೀಡಲು ಪ್ರಥಮ್ ನಿರ್ಧರಿಸಿದ್ದು, ಈ ಬಗ್ಗೆ ತಮ್ಮ ಫೇಸ್ ಬುಕ್ ಪೇಜಿನಲ್ಲಿ ಪೋಸ್ಟ್ ಹಾಕಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?: ಈ ಹಿಂದೆ ಪಬ್ಲಿಕ್ ಟಿವಿ ಹೀರೋ ಆಗಿದ್ದ ಮಂಗಳೂರಿನ ತಬಸ್ಸುಮ್ ಎಂಬ ಮುಸಲ್ಮಾನ ಮಹಿಳೆ ಬಹಳ ಒಳ್ಳೆಯ ಕೆಲಸ ಮಾಡುತ್ತಾ ಇದ್ದಾರೆ. ಸಾಮಾನ್ಯವಾಗಿ ಅನಾಥ ಮಕ್ಕಳಿಗೆ ಆಶ್ರಯ, ವಿದ್ಯೆ ನೀಡುವ ಕೆಲವರ ಬಗ್ಗೆ ನಿಮಗೆ ಗೊತ್ತಿದೆ. ಆದರೆ ತಬಸ್ಸುಮ್ ಎಚ್‍ಐವಿ ಸೋಂಕಿನ ಮಕ್ಕಳಿಗೆ ವಿದ್ಯಾಭ್ಯಾಸ, ಆಶ್ರಯ ನೀಡುತ್ತಿದ್ದಾರೆ.

ಎಲ್ಲಾ ಜಾತಿಯ (ಎಚ್‍ಐವಿ) ಸೋಂಕಿರುವ ಮಕ್ಕಳು ಇಲ್ಲಿ ಇದ್ದಾರೆ. ಇವರ ಸಂಪೂರ್ಣ ಜವಾಬ್ದಾರಿ ಹಿರಿಯರು, ಸೋದರರಾದ ರಶೀದ್ ವಿಟ್ಲಾ ರವರು ಈ ಟ್ರಸ್ಟ್ ಗೆ ಸಹಕಾರ ನೀಡುತ್ತಾ ಇದ್ದಾರೆ. ಮೊನ್ನೆ ಫೋನ್ ಮಾಡಿ ಮಂಗಳೂರಿಗೆ ಹೋದಾಗ ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಬಹಳ ಖುಷಿ ಆಯ್ತು ಇವರ ಬಗ್ಗೆ. ಎಂತ ಒಳ್ಳೆ ಕೆಲಸ ಮಾಡುತ್ತಾ ಇದ್ದಾರೆ.

ಹೆಚ್ಚು ಕಟ್ಟುಪಾಡುಗಳಿರುವ ಮುಸ್ಲಿಮರಲ್ಲಿ ಇಂತ ದಿಟ್ಟತನ ನೋಡಿ ಹೆಮ್ಮೆ ಅನಿಸಿತು. ನನ್ನ ಕೈಲಾದ ಧನಸಹಾಯ ನೀಡಿದ್ದೇನೆ. ಮುಂದೆಯೂ ನೀಡುವ ಮಾತನ್ನ ಕೊಟ್ಟು ಬಹಳ ಹೆಮ್ಮೆಯಿಂದ ಬಂದೆ. ಎಚ್‍ಐವಿ ಸೋಂಕಿರುವ ಕಾರಣ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಅವರ ಫೋಟೋ ಬ್ಲರ್ ಮಾಡಲಾಗಿದೆ. ರಷೀದ್ ರವರ ಮೇಲೆ ಅಭಿಮಾನ ಜಾಸ್ತಿಯಾಗಿದೆ. ಇನ್ನು ಮುಂದೆ ನನ್ನನ್ನು ಯಾರೇ ಕಾರ್ಯಕ್ರಮಕ್ಕೆ ಕರೆದರೂ ಈ ಆಶ್ರಮಕ್ಕೆ ಅರ್ಧ ದುಡ್ಡು ಕೊಡುವ ಮನಸ್ಸು ಮಾಡಿದ್ದೇನೆ. ಇಂತಹ ಹೆಮ್ಮೆಯ ಮುಸ್ಲಿಮರು (ತಬಸ್ಸುಮ್, ರಶೀದ್) ನನಗೆ ಆದರ್ಶವಾಗಿದ್ದಾರೆ.

ಇನ್ಮೇಲೆ ನನ್ನ ಕಾರ್ಯಕ್ರಮಕ್ಕೆ ಕರೆಯೋದಾದರೆ ಈ ಆಶ್ರಮಕ್ಕೆ ದುಡ್ಡು ಕೊಡಲೇಬೇಕು. ಇಲ್ಲ ಅಂದರೆ ನಾನು ಬರಲ್ಲ. ನಿಮ್ಮೆಲ್ಲರಲ್ಲೂ ಒಂದು ಮನವಿ, ಆ ಮುಸ್ಲಿಂ ಸೋದರಿ ತಬಸ್ಸುಮ್ ರಿಗೆ ಅಭಿನಂದಿಸುತ್ತಾ ದಯವಿಟ್ಟು ಈ ಖಾತೆಗೆ ನಿಮ್ಮ ಕೈಲಾದ ಸಹಾಯ ಮಾಡಿ. ನಿಮ್ಮ ಸಂಪೂರ್ಣ ದುಡ್ಡು ಆ ಮಕ್ಕಳ ನೆಮ್ಮದಿಯ ನಾಳಿನ ಬದುಕಿಗೆ ಆಗುತ್ತದೆ. ಆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಫೋಟೋ ಮರೆಮಾಚಲಾಗಿದೆ. ಇನ್ಮೇಲೆ ನನ್ನ ಕಾರ್ಯಕ್ರಮಕ್ಕೆ ಕರೆದರೆ ಇಲ್ಲಿಗೂ ಸ್ವಲ್ಪ ದುಡ್ಡು ಕೊಡಲೇಬೇಕು.

https://www.youtube.com/watch?v=adauJZDY0PU

Comments

Leave a Reply

Your email address will not be published. Required fields are marked *