ತೊಗಾಡಿಯಾರ ಬದಲು ಹಿಂದೂ ವಿರೋಧಿ ಓವೈಸಿಯನ್ನು ಎನ್‍ಕೌಂಟರ್ ಮಾಡ್ಬೇಕಿತ್ತು- ಬಿಜೆಪಿ ವಿರುದ್ಧ ಮುತಾಲಿಕ್ ವಾಗ್ದಾಳಿ

ಹುಬ್ಬಳ್ಳಿ: ವಿಶ್ವ ಹಿಂದೂ ಪರಿಷದ್ ಮುಖ್ಯಸ್ಥ ಪ್ರವೀಣ್ ಭಾಯ್ ತೊಗಾಡಿಯಾ ಅವರನ್ನು ಎನ್ ಕೌಂಟರ್ ಮಾಡ ಹೊರಟವರು ಮೊದಲು ಹಿಂದೂ ವಿರೋಧಿ ಅಕ್ಬರುದ್ದೀನ್ ಓವೈಸಿಯನ್ನು ಎನ್ ಕೌಂಟರ್ ಮಾಡಬೇಕಿತ್ತು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯ ಕೇಶ್ವಾಪುರದ ರಾಯ್ಕರ ಭವನದಲ್ಲಿ ಪ್ರವೀಣ್ ಭಾಯ್ ತೊಗಾಡಿಯಾ ಅಭಿಮಾನಿ ಬಳಗ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಅವರು, ಹಿಂದೂಸ್ತಾನ್ ದಲ್ಲಿಯೇ ಹಿಂದೂ ಹೋರಾಟಗಾರರನ್ನು ಎನ್ ಕೌಂಟರ್ ಮಾಡಲು ಮುಂದಾಗಿದ್ದು ದುರಂತ. ತೊಗಾಡಿಯಾ ಅವರ ಎನ್ ಕೌಂಟರ್ ಮಾಡುವ ಬದಲು ಹಿಂದು ವಿರೋಧಿ ಓವೈಸಿ ಎನ್‍ಕೌಂಟರ್ ಮಾಡಬೇಕಿತ್ತು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಹಿಂದೂ ಸಮಾಜವನ್ನು ಬಳಸಿಕೊಂಡು ಬಿಜೆಪಿ ಅಧಿಕಾರ ಹಿಡಿದಿದೆ. ಈಗ ಹಿಂದು ಹೋರಾಟಗಾರ ತೆಲೆಯ ಮೇಲೆ ಕಾಲಿಟ್ಟು ಬಿಜೆಪಿ ಅಧಿಕಾರ ಮಾಡುತ್ತಿದೆ. ನಮ್ಮ ಹೋರಾಟವನ್ನು ಬಳಸಿಕೊಂಡು ಅಧಿಕಾರ ಹಿಡಿದಿರುವ ಬಿಜೆಪಿಗೆ ತಕ್ಕ ಪಾಠ ಕಲಿಸುವ ಕಾಲ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಿಜೆಪಿಯ ದರ್ಪ ಹಾಗೂ ದುರಾಡಳಿತ ಕಾರಣವಾಗಿದೆ. ಕಳೆದ 50 ವರ್ಷದಲ್ಲಿ ಕಾಂಗ್ರೆಸ್ ಲೂಟಿ ಮಾಡಿದಕ್ಕಿಂತ ಹೆಚ್ಚು 5 ವರ್ಷದಲ್ಲಿ ಬಿಜೆಪಿ ಅವರು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಯಾರು ಅಕ್ಬರುದ್ದೀನ್ ಓವೈಸಿ:
ಆಲ್ ಇಂಡಿಯಾ ಮಜ್ಲಿಸ್ ಎಇತ್ತೆಹಾದುಲ್ ಮುಸ್ಲಿಮೀನ್‍ನ (ಎಂಐಎಂ) ಪಕ್ಷದ ನಾಯಕ, ಹಾಲಿ ಸಂಸದರಾಗಿರುವ ಅಸಾದುದ್ದೀನ್ ಓವೈಸಿ ಅವರ ಸಹೋದರರಾಗಿರುವ ಅಕ್ಬರುದ್ದೀನ್ ಓವೈಸಿ ಈ ಹಿಂದೆ ಹಿಂದೂ ಧರ್ಮವನ್ನು ವಿರೋಧಿಸಿ ಭಾಷಣ ಮಾಡಿದ್ದರು. ಪ್ರಸ್ತುತ ಅಕ್ಬರುದ್ದೀನ್ ಓವೈಸಿ ತೆಲಂಗಾಣ ರಾಜ್ಯದ ಎಂಐಎಂ ಪಕ್ಷದ ಚಂದ್ರರಾಯನಗುಟ್ಟ ಕ್ಷೇತ್ರದ ಶಾಸಕರಾಗಿದ್ದಾರೆ.

Comments

Leave a Reply

Your email address will not be published. Required fields are marked *