ಪ್ರಮೋದ್ ಮಧ್ವರಾಜ್ ಬೆಂಬಲಿಗನ ಮೇಲೆ ರಾಡ್‍ನಿಂದ ಹಲ್ಲೆ – ದೂರು ದಾಖಲು

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬೆಂಬಲಿಗನಿಗೆ ಹಿಗ್ಗಾಮುಗ್ಗ ಹಲ್ಲೆ ನಡೆಸಿರುವ ಘಟನೆ ಜಿಲ್ಲೆ ಮಲ್ಪೆ ಸಮೀಪದ ಬಡಾ ನಿಡಿಯೂರು ಎಂಬಲ್ಲಿ ನಡೆದಿದೆ.

ಕಾಂಗ್ರೆಸ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬೆಂಬಲಿಗ ಸುನೀಲ್ ಡಿಸೋಜಾ ಮೇಲೆ ದಾಳಿಯಾಗಿದ್ದು, ಐದು ಮಂದಿ ಯುವಕರ ಗುಂಪು ಹಿಗ್ಗಾಮುಗ್ಗ ಥಳಿಸಿದ್ದಾರೆ. ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿರುವ ಯುವಕರು, ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದಾಖಲಾಗದ ಭಾಗದಲ್ಲಿ ರಾಡ್ ನಿಂದ ಹಲ್ಲೆ ಮಾಡಿರುವುದಾಗಿ ದೂರಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಲಾಗಿದೆ.

ಗಾಯಾಳು ಸುನೀಲ್ ಡಿಸೋಜಾ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುನೀಲ್ ಡಿಸೋಜಾ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬೆಂಬಲಿಗನಾಗಿದ್ದು, ಮಲ್ಪೆ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದರು. ಹಲ್ಲೆ ಕುರಿತು ಪ್ರತಿಕ್ರಿಯೆ ನೀಡಿರುವ ಹಲ್ಲೆಗೊಳಗಾದ ಸುನೀಲ್ ಡಿಸೋಜಾ, ಕಳೆದ ರಾತ್ರಿ ಫೋನ್ ನಲ್ಲಿ ಮಾತನಾಡುತ್ತಿರುವಾಗ ಗುಂಪೊಂದು ದಾಳಿ ಮಾಡಿದೆ. ಹಿಂದೆಯೂ ಮನೆ ಪಕ್ಕದಲ್ಲಿ ಬಂದು ಕುಡಿಯೋದು, ಮನೆಗೆ ಕಲ್ಲು ಎಸೆಯೋದು ಮಾಡುತ್ತಿದ್ದರು. ಚುನಾವಣೆ ಸಂದರ್ಭದಲ್ಲೂ ಬ್ಯಾನರ್ ವಿಚಾರದಲ್ಲಿ ಜಗಳವಾಗಿತ್ತು ಎಂದು ದೂರಿದ್ದಾರೆ.

ಘಟನೆಗೆ ಕುರಿತಂತೆ ಬಡಾ ನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಎಂಬವರ ಮೇಲೆ ಸುನೀಲ್ ಡಿಸೋಜಾ ದೂರು ನೀಡಿದ್ದಾರೆ. ಅಂದಹಾಗೇ ಉಮೇಶ್ ಪೂಜಾರಿ ಬಿಜೆಪಿಯ ಸ್ಥಳೀಯ ಮುಖಂಡನಾಗಿದ್ದು ಬಡಾನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದಾರೆ.

ಹಲ್ಲೆ ಕುರಿತು ಎಐಸಿಸಿ ಸದಸ್ಯ ಅಮೃತ್ ಶೆಣೈ ಮಾತನಾಡಿ, ನಗರಸಭೆ ಚುನಾವಣೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬಿಜೆಪಿಯವರಿಗೆ ಕಾಂಗ್ರೆಸ್ ಜೊತೆ ಅಭಿಪ್ರಾಯ ಬೇಧ ಇರಬಹುದು. ರಾಜಕೀಯ ಏನೇ ಇದ್ದರೂ ವೈಯುಕ್ತಿಕ ಹಲ್ಲೆ ಸರಿಯಲ್ಲ. ಉಡುಪಿ ಜಿಲ್ಲೆಯಲ್ಲಿ ಐದು ಬಿಜೆಪಿ ಶಾಸಕರು ಇರುವುದರಿಂದ ಪೊಲೀಸರ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಎಸ್‍ಪಿ ಗೆ ಈ ಬಗ್ಗೆ ದೂರು ನೀಡುವುದಾಗಿ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *