ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನದಲ್ಲಿ ಸಿಎಂ ಇಲ್ಲ, ರಾಹುಲ್ ಗಾಂಧಿಯೂ ಇಲ್ಲ!

ಉಡುಪಿ:  ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರ  ನಡೆ ಅನುಮಾನಕ್ಕೆ ಎಡೆ ಮಾಡಿದ್ದು ಬಿಜೆಪಿ ಸೇರುತ್ತಾರಾ ಎನ್ನುವ  ಪ್ರಶ್ನೆ ಈಗ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಸಚಿವರ ಚುನಾವಣಾ ಪ್ರಚಾರಕ್ಕಾಗಿ ನಿರ್ಮಿಸಲಾಗಿರುವ  ಪ್ರಚಾರ ವಾಹನ ಎಲ್ಲರ ಗಮನ ಸೆಳೆಯುತ್ತಿದ್ದು, ಈ ವಾಹನದಲ್ಲಿ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಕಾಂಗ್ರೆಸ್ ಚಿಹ್ನೆ ಯಾವುದು ಇಲ್ಲದ ಕಾರಣ ಪ್ರಶ್ನೆ ಎದ್ದಿದೆ.

ಇಲಾಖೆಯ ಮಾಹಿತಿಯಾಗಲೀ, ರಾಜ್ಯ ಸರಕಾರದ ಕಲ್ಯಾಣ ಯೋಜನೆಗಳಾಗಲೀ ಈ ಪ್ರಚಾರ ವಾಹನದಲ್ಲಿಲ್ಲ. ಬದಲಾಗಿ ವಾಹನದ ಹೋರ್ಡಿಂಗ್ ಗಳಲ್ಲಿ ಸಚಿವರೇ ಮಿಂಚುತ್ತಿದ್ದಾರೆ. ಫೋಟೋದ ಜೊತೆಗೆ ಅಭಿವೃದ್ದಿಯೊಂದಿಗೆ ನನ್ನ ಹೆಜ್ಜೆ, ಜೊತೆಗಿರಲಿ ನಿಮ್ಮ ಹೆಜ್ಜೆ ಎಂಬ ಬರಹಗಳಿವೆ.

ಎಲ್ಲಿಯೂ ಸರಕಾರದ ಸಾಧನೆಗಳನ್ನು ಬಿಂಬಿಸುವ ಪ್ರಯತ್ನ ಈ ವಾಹನದಲ್ಲಿ ಕಾಣಿಸುವುದಿಲ್ಲ. ಕೆಲ ತಿಂಗಳುಗಳಿಂದ ಸಚಿವ ಮಧ್ವರಾಜ್ ಬಿಜೆಪಿ ಸೇರ್ಪಡೆ ಸುದ್ದಿಗೆ ರೆಕ್ಕೆ ಪುಕ್ಕ ಬಂದಿತ್ತು. ಈ ಕಾರಣಕ್ಕಾಗಿಯೇ ಸಚಿವರು ರಾಜ್ಯ ಸರಕಾರದ ಸಾಧನೆಗಳನ್ನು ಬಿಂಬಿಸಲಿಲ್ಲವೇ? ಭವಿಷ್ಯದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಸಲುವಾಗಿ ಈಗಿನಿಂದಲೇ ಸಚಿವರು ತಯಾರಿ ನಡೆಸುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಮತ್ತೆ ಚರ್ಚೆಯಾಗುತ್ತಿದೆ.

ನಗರಸಭಾ ಸದಸ್ಯ ಕಾಂಗ್ರೆಸ್ ಯುವ ಮುಖಂಡ ರಮೇಶ್ ಕಾಂಚನ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಮಧ್ವರಾಜ್ ಬಿಜೆಪಿ ಸೇರುವುದು ಜೋಕ್. ಇದು ಬರೀ ಅಪಪ್ರಚಾರ. ಅವರು ಕಾಂಗ್ರೆಸ್ ನಲ್ಲೇ ಇದ್ದಾರೆ. ಮುಂದೆಯೂ ಇರುತ್ತಾರೆ ಎಂದು ಹೇಳಿದ್ದಾರೆ. ಬಿಜೆಪಿಯವರು ಬರೀ ಅಪ ಪ್ರಚಾರ ಮಾಡುವುದನ್ನು ಬಿಡಿ ಅಂತ ಹೇಳಿದ್ದಾರೆ. ಆದ್ರೆ ಹಲವಾರು ಬಾರಿ ನಾನು ಬಿಜೆಪಿ ಸೇರಲ್ಲ ಎನ್ನುವ ಮಧ್ವರಾಜ್ ಈ ಬಾರಿ ಇದಕ್ಕೇನು ಉತ್ತರ ಕೊಡ್ತಾರೆ ಅಂತ ಕುತೂಹಲ ಇದೆ.

Comments

Leave a Reply

Your email address will not be published. Required fields are marked *