ಇದೇ ವರ್ಷ ಪ್ರಭಾಸ್ ಮದುವೆ: ಕೃಷ್ಣಂ ರಾಜು ಸ್ಪಷ್ಟನೆ

ಹೈದರಾಬಾದ್: ಬಾಹುಬಲಿ ಮೂಲಕ ವಿಶ್ವದ್ಯಾದಂತ ಅಭಿಮಾನಿಗಳನ್ನು ಗಳಿಸಿರುವ ನಟ ಪ್ರಭಾಸ್, ಮದುವೆ ವಿಚಾರಕ್ಕೆ ಹಲವು ಬಾರಿ ಸುದ್ದಿಯಾಗಿದ್ದಾರೆ. ಈಗ ಅವರ ಮದುವೆಯ ಕುರಿತು ಟಾಲಿವುಡ್ ನಟ, ಪ್ರಭಾಸ್ ಅವರ ದೊಡ್ಡಪ್ಪ ಮಾಧ್ಯಮಗಳ ಜೊತೆ ಮಾತನಾಡಿದ್ದು, ಪ್ರಭಾಸ್ ಇದೇ ವರ್ಷ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ.

ಹೈದರಾಬಾದ್‍ನಲ್ಲಿ ಶನಿವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೃಷ್ಣಂ ರಾಜು, ಪ್ರತಿ ಬಾರಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಪ್ರಭಾಸ್ ಅವರ ಮದುವೆ ಕುರಿತು ಪ್ರಶ್ನೆ ಎದುರಾಗುತ್ತದೆ. ಪ್ರತಿ ಬಾರಿ ಈ ಕುರಿತು ಉತ್ತರಿಸಲು ಮುಜುಗರ ಉಂಟಾಗುತ್ತದೆ. ಪ್ರಭಾಸ್ ಇದೇ ವರ್ಷ ಮದುವೆಯಾಗಲಿದ್ದಾರೆ ಎಂದು ಹೇಳಿದರು.

ಈ ಹಿಂದೆ ತಮ್ಮ ಮದುವೆಯ ಕುರಿತು ಮಾತನಾಡಿದ ಪ್ರಭಾಸ್, ನನಗೆ ಈಗಾಗಲೇ 6 ಸಾವಿರ ಮದುವೆ ಪ್ರಸ್ತಾಪಗಳು ಬಂದಿದ್ದು, ಕೆಲಸದಲ್ಲಿ ತೊಡಗಿಕೊಂಡಿರುವುದರಿಂದ ಅವುಗಳನ್ನು ನಿರಾಕರಿಸಿದ್ದಾಗಿ ತಿಳಿಸಿದ್ದರು. ಅಲ್ಲದೇ ನಟಿ ಅನುಷ್ಕಾ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿರುವ ಕುರಿತು ವದಂತಿಗಳು ಹಬ್ಬಿದ್ದವು. ಇದನ್ನ ನಿರಾಕರಿಸಿದ್ದ ಪ್ರಭಾಸ್ ನಾನೂ ಅನುಷ್ಕಾ ನಮ್ಮಿಬ್ಬರ ಬಗ್ಗೆ ಡೇಟಿಂಗ್ ವದಂತಿಗಳು ಬರಬಾರದು ಎಂದು ನಿರ್ಧರಿಸಿದ್ದೆವು ಎಂದು ಹೇಳಿದ್ದರು.

ಕೆಲ ದಿನಗಳ ಹಿಂದೆ `ಭಾಗಮತಿ’ ಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅನುಷ್ಕಾ ಶೆಟ್ಟಿ, ಪ್ರಭಾಸ್ ನನ್ನ ಅತ್ಯುತ್ತಮ ಸ್ನೇಹಿತ. ಪ್ರಭಾಸ್ ತಮ್ಮ ನಡುವೆ ಇರುವ ಪ್ರೀತಿ, ಪ್ರೇಮ, ಮದುವೆ ಎಂದು ಹೇಳುತ್ತಿರುವ ಗಾಳಿ ಸುದ್ದಿಯೆಲ್ಲಾ ಸುಳ್ಳು ಎಂದು ಹೇಳಿ ವದಂತಿಯನ್ನ ತಳ್ಳಿ ಹಾಕಿದ್ದರು. ಈ ವೇಳೆ ಚಿತ್ರದ ಕುರಿತು ಮಾಹಿತಿ ನೀಡಿದ ಅವರು, `ಭಾಗಮತಿ’ ಚಿತ್ರದಲ್ಲಿ ಐಪಿಎಸ್ ಪಾತ್ರಧಾರಿಯಾದ ಚಂಚಲ ಭಾಗಮತಿಯಾಗಿ ಹೇಗೆ ಬದಲಾಗುತ್ತಾರೆ ಎಂಬುದು ಚಿತ್ರದ ಕಥೆಯಾಗಿದೆ ಎಂದರು. ನಿರ್ದೇಶಕ ಪೂರಿ ಜಗನಾಥ್ ನನ್ನ ಗುರು. ಅವರಿಂದ ಬಹಳ ಕಲಿತಿದ್ದೇನೆ. ನಿರ್ದೇಶಕ ರಾಜಮೌಳಿ ಚಿತ್ರದಲ್ಲಿ ಮತ್ತೆ ಅಭಿನಯಿಸುವ ಬಯಕೆ ಇದೆ ಎಂದು ಹೇಳಿದ್ದರು.

ಪ್ರಸ್ತುತ ಪ್ರಭಾಸ್ ಸುಜೀತ್ ನಿರ್ದೇಶನದ `ಸಾಹೋ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಕಪೂರ್ ಮತ್ತು ನೀಲ್ ನಿತಿನ್ ಮುಖೇಶ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದು, ಚಿತ್ರವು ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

Comments

Leave a Reply

Your email address will not be published. Required fields are marked *