ಮೂತ್ರ ವಿಸರ್ಜನೆ ಜಾಗದಲ್ಲಿ ಹಿಂದೂ ದೇವರ ಪೋಸ್ಟರ್- ಕಿಡಿಗೇಡಿಗಳ ಕೃತ್ಯಕ್ಕೆ ಹಿಂದೂ ಸಂಘಟಕರಿಂದ ದಾಂಧಲೆ

ಬಾಗಲಕೋಟೆ: ಮೂತ್ರ ವಿಸರ್ಜನೆ ಜಾಗದಲ್ಲಿ ಹಿಂದೂ ದೇವರ ಪೋಸ್ಟರ್ ಗಳನ್ನು ಹಚ್ಚಿದ್ದ ಸಂಬಂಧ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಅಂಗಡಿಯೊಂದರ ಸಾಮಾನುಗಳನ್ನ ಧ್ವಂಸಗೊಳಿಸಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡದಲ್ಲಿ ನಡೆದಿದೆ.

ಪಟ್ಟಣದ ಹಳೇ ಮಾರ್ಕೆಟ್ ಬಳಿ ಇದ್ದ ರೋಷನ್ ಹೋಟೆಲ್‍ನಲ್ಲಿ ಈ ಘಟನೆ ನಡೆದಿದ್ದು, ಬೆಳಗಿನ ಜಾವ ಕೆಲವು ಹಿಂದೂ ಪರ ಯುವಕರು ಮೂತ್ರ ವಿಸರ್ಜನೆಗೆ ತೆರಳಿದ ವೇಳೆ, ಮೂತ್ರ ವಿಸರ್ಜನೆ ಜಾಗದಲ್ಲಿ ಹೋಟೆಲ್ ಮಾಲೀಕ ಹಿಂದೂ ದೇವರ ಫೋಟೋಗಳನ್ನು ಹಚ್ಚಿದ್ದನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾಲೀಕ ಸಮರ್ಥಿಸಿಕೊಳ್ಳಲು ಮುಂದಾಗಿದ್ದು, ಪರಿಣಾಮ ಸ್ಥಳದಲ್ಲೇ ಮಾತಿಗೆ ಮಾತು ಬೆಳೆದು ಹೋಟೆಲ್ ನಲ್ಲಿಯೇ ಗಲಾಟೆ ನಡೆದಿದೆ. ಘಟನೆಯಿಂದಾಗಿ ಹೋಟೆಲ್ ನಲ್ಲಿದ್ದ ಕುರ್ಚಿ, ಟೇಬಲ್ ಸೇರಿದಂತೆ ಹಲವು ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.

ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರೋ ಪೊಲೀಸರು ಹೋಟೆಲ್ ಮಾಲೀಕನನ್ನ ವಶಕ್ಕೆ ಪಡೆದುಕೊಂಡಿದ್ದು, ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನ ನಿಯೋಜಿಸಿದ್ದಾರೆ.

Comments

Leave a Reply

Your email address will not be published. Required fields are marked *