ಹಾವೇರಿ| ಕಳಪೆ ಗುಣಮಟ್ಟದ ಆಹಾರ ವಿತರಣೆ – ಹಾಸ್ಟೆಲ್ ವಿದ್ಯಾರ್ಥಿಗಳಿಂದ ಉಪವಾಸ ಧರಣಿ

ಹಾವೇರಿ: ಕಳಪೆ ಗುಣಮಟ್ಟದ ಆಹಾರ ವಿತರಣೆ ವಿರುದ್ಧ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಊಟ ಸೇವಿಸದೆ ಉಪವಾಸ ಕುಳಿತ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.

ತಾಲೂಕಿನ ದೇವಗಿರಿ ಎಂಜಿನಿಯರಿಂಗ್ ಕಾಲೇಜು ಹಿಂಭಾಗದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಇಲಿ ಹಿಕ್ಕೆ ಬಿದ್ದ ಅಕ್ಕಿ, ನೊರಜು, ಹುಳ ಹತ್ತಿದ ತರಕಾರಿ, ಕೊಳೆತ ಬಾಳೆ ಹಣ್ಣು, ಕೆಟ್ಟು ನಾರುವ ಮೊಟ್ಟೆ ವಿತರಣೆ ಮಾಡುತ್ತಿರುವುದಕ್ಕೆ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ವಿದ್ಯಾರ್ಥಿಗಳು ಹಾಸ್ಟೆಲ್ ಅವ್ಯವಸ್ಥೆ ಬೆಳಕಿಗೆ ತರುತ್ತಿದ್ದಂತೆ ಹಾಸ್ಟೆಲ್ ಸಿಬ್ಬಂದಿ ಕೊಳೆತು ಹಾಳಾದ ಆಹಾರ ಪದಾರ್ಥಗಳನ್ನು ಹಾಸ್ಟೆಲ್ ಹಿಂಭಾಗದಲ್ಲಿ ಎಸೆದು ಬಂದಿದ್ದಾರೆ. ಇದನ್ನೂ ಓದಿ: Kolar | ಪರಿಚಯಸ್ಥರ ಸೋಗಿನಲ್ಲಿ ಬಂದು ಒಂಟಿ ಮನೆ ದೋಚಿದ ನಾಲ್ವರು ದುಷ್ಕರ್ಮಿಗಳು

ಇನ್ನು ಹಾಸ್ಟೆಲ್‌ನಲ್ಲಿಯ ವಿದ್ಯಾರ್ಥಿಗಳ ಗ್ರಂಥಾಲಯವನ್ನೆ ದಾಸ್ತಾನು ಕೊಠಡಿ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಕೂಡಲೇ ಅವ್ಯವಸ್ಥೆ ಸರಿಪಡಿಸಿ, ಗುಣಮಟ್ಟದ ಊಟಕ್ಕೆ ಆದ್ಯತೆ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಓದಿಗೆ ಬೇಕಾದ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕು. ಅಲ್ಲಿಯವರೆಗೂ ಊಟ ಮಾಡುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ಕುಳಿತಿದ್ದಾರೆ. ಇದನ್ನೂ ಓದಿ: ಶೃಂಗೇರಿಗೆ ಡಿಕೆಶಿ ಭೇಟಿ – ಕಾರ್ತ ವೀರ್ಯಾರ್ಜುನನಿಗೆ ವಿಶೇಷ ಪೂಜೆ