ಗುರುವಾರ ಬೆಳಗ್ಗೆ 11 ಗಂಟೆಗೆ ಸರ್ಕಾರದ ಭವಿಷ್ಯ ನಿರ್ಧಾರ

ಬೆಂಗಳೂರು: ಗುರುವಾರ ಸಿಎಂ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಈ ಮೂಲಕ ಮೂರು ದಿನ ಸರ್ಕಾರ ಸೇಫ್ ಆಗಿರಲಿದೆ.

ಇಂದು ಮಧ್ಯಾಹ್ನ 1 ಗಂಟೆಯ ವೇಳೆ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಸಲಹಾ ಸಮಿತಿ ಸಭೆ ನಡೆಯಿತು. ಈ ವೇಳೆ ಬಿಎಸ್ ಯಡಿಯೂರಪ್ಪ ಇಂದೇ ಸಿಎಂ ವಿಶ್ವಾಸ ಮತಯಾಚನೆ ಮಾಡಬೇಕು ಎಂದು ಪಟ್ಟು ಹಿಡಿದರು.

ಸರ್ಕಾರ ಮತ್ತು ಆಡಳಿತ ಪಕ್ಷದ ನಾಯಕರ ಜೊತೆ ಸ್ಪೀಕರ್ ಸುಮಾರು ಮುಕ್ಕಾಲು ಗಂಟೆ ಸಭೆ ನಡೆಸಿದರು. ನಂತರ ಸ್ಪೀಕರ್ ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸ ಮತ ಸಾಬೀತು ಪಡಿಸಲು ಸಿಎಂಗೆ ಅನುಮತಿ ನೀಡಿದರು.

ಈ ಸಭೆಯಲ್ಲಿ ಬಿಎಸ್‍ವೈ, ಸುಪ್ರೀಂ ತೀರ್ಪು ಯಾವಾಗ ಬೇಕಾದರೂ ಬರಲಿ. ಆದರೆ ಸಿಎಂ ಇಂದೇ ವಿಶ್ವಾಸ ಮತ ಯಾಚನೆ ಮಾಡಬೇಕು. ಯಾಕೆಂದರೆ ಸರ್ಕಾರಕ್ಕೆ ಬಹುಮತ ಇಲ್ಲ. ಮೈತ್ರಿ ಸರ್ಕಾರದ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಪಟ್ಟು ಹಿಡಿದರು.

ಈ ವೇಳೆ ಸ್ಪೀಕರ್ ಅವರು, ನಾಳೆ ಸುಪ್ರೀಂ ತೀರ್ಪು ಬರಲಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಿರಿ. ತೀರ್ಪಿನ ಬಳಿಕ ದಿನಾಂಕ ನಿಗದಿ ಮಾಡೋಣ ಎಂದು ಸಲಹೆ ನೀಡಿದರು. ಆದರೆ ಸ್ಪೀಕರ್ ನಿರ್ಧಾರಕ್ಕೆ ಬಿಎಸ್‍ವೈ ವಿರೋಧ ವ್ಯಕ್ತಪಡಿಸಿದರು ಎಂದು ಮೂಲಗಳಿಂದ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *