ಪ್ರೀತಿ ವಿಚಾರಕ್ಕೆ ಕುಟುಂಬದವರ ಮಧ್ಯೆ ಜಗಳ- ಯುವಕ ಆತ್ಮಹತ್ಯೆ

ಹೈದರಾಬಾದ್: ಲವ್ ಫೇಲ್ಯೂರ್ ಆಗಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಹೈದರಾಬಾದ್‍ನ ಶಿವಾಜಿನಗರದಲ್ಲಿ ನಡೆದಿದೆ.

ವಿನೋದ್ (22) ಆತ್ಮಹತ್ಯೆಗೆ ಶರಣಾದ ಯುವಕ. ಈತ ಶಿವಾಜಿನಗರದಲ್ಲಿ ವಾಸಿಸುತ್ತಿದ್ದು, ಕೊರಿಯರ್ ಹುಡುಗನಾಗಿ ಕೆಲಸ ಮಾಡುತ್ತಿದ್ದನು. ತಾನು ಕೆಲಸ ಮಾಡುತ್ತಿದ್ದಲ್ಲಿಯೇ ಯುವತಿಯೊಬ್ಬಳ ಪರಿಚಯವಾಗಿತ್ತು. ದಿನಗಳೆದಂತೆ ಪರಿಚಯ ಪ್ರೀತಿಯಾಗಿ ಬದಲಾಗಿ ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಈ ವಿಚಾರ ಎರಡೂ ಮನೆಯವರಿಗೆ ಗೊತ್ತಾಗಿದ್ದು, ಕುಟುಂಬದವರ ಮಧ್ಯೆ ಜಗಳ ನಡೆದಿತ್ತು ಎಂದು ತಿಳಿದು ಬಂದಿದೆ.

ಶುಕ್ರವಾರ ರಾತ್ರಿ ವಿನೋದ್ ಮನೆಯಲ್ಲಿ ತನ್ನ ರೂಮಿನ ಬಾಗಿಲು ಹಾಕಿಕೊಂಡಿದ್ದನು. ತುಂಬಾ ಸಮಯವಾದರೂ ಆತ ಹೊರಗಡೆ ಬಂದಿಲ್ಲ. ಸ್ನೇಹಿತರು ಫೋನ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕೊನೆಗೆ ಕಿಟಿಕಿಯಲ್ಲಿ ನೋಡಿದಾಗ ವಿನೋದ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನು.

ತಕ್ಷಣ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿ, ಆತನನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿಯೇ ವಿನೋದ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರೀತಿ ವಿಚಾರವಾಗಿ ಮನನೊಂದು ವಿನೋದ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಆದರೆ ವಿನೋದ್ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *