ಸಬ್ ಇನ್ಸ್‌ಪೆಕ್ಟರ್‌ನಿಂದ ಹೆಡ್ ಕಾನ್ಸ್‌ಟೇಬಲ್ ಮೇಲೆಯೇ ಹಲ್ಲೆ!

ದಾವಣಗೆರೆ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಅಧಿಕಾರಿಯೊಬ್ಬರು ಹೆಡ್ ಕಾನ್ಸ್‌ಟೇಬಲ್ ಮೇಲೆಯೇ ಹಲ್ಲೆ ನಡೆಸಿದ್ದಲ್ಲದೇ, ಗೂಂಡಾಗಳನ್ನು ಕರೆಸಿ ಹಲ್ಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯಾನಗರ ಪೊಲೀಸ್ ಠಾಣೆಯ ಹನುಮಂತಪ್ಪ ಹಲ್ಲೆಗೊಳಗಾದ ಹೆಡ್‍ ಕಾನ್ಸ್‌ಟೇಬಲ್ ಆಗಿದ್ದಾರೆ. ಅದೇ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಸಿದ್ದೇಶ್ ಹಲ್ಲೆಮಾಡಿದ್ದಾರೆ. ಕಳೆದ ಶುಕ್ರವಾರ ಠಾಣಾಧಿಕಾರಿ ನೇಮಕ ವಿಚಾರದಲ್ಲಿ ಪಿಎಸ್‍ಐ ಹಾಗೂ ಹೆಡ್ ಕಾನ್ಸಟೇಬಲ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಪಿಎಸ್‍ಐ ಕಾನ್ಸಟೇಬಲ್ ಹನುಮಂತಪ್ಪನವರನ್ನು ನಗರದ ಆಫೀಸರ್ಸ್ ಕ್ಲಬ್ ಬಳಿ ಬರಲು ತಿಳಿಸಿದ್ದಾರೆ.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಹನುಮಂತಪ್ಪನವರ ಮೇಲೆ ಪಿಎಸ್‍ಐ ನನ್ನ ವಿರುದ್ಧವೇ ಮಾತನಾಡುತ್ತೀಯ ಎಂದು ಏಕಾಏಕಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಹನುಮಂತಪ್ಪನವರ ಮುಖಕ್ಕೆ ಬೂಟುಗಾಲಿನಿಂದಲೂ ಹಲ್ಲೆ ನಡೆಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಪಿಎಸ್‍ಐ ಇಬ್ಬರು ಗೂಂಡಾಗಳನ್ನು ಕರೆಸಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಗಂಭೀರವಾಗಿ ಹಲ್ಲೆಗೊಳಗಾದ ಹನುಮಂತಪ್ಪನವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪಿಎಸ್‍ಐ ಸಿದ್ದೇಶ್ ವಿರುದ್ಧ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಐಜಿಯವರಿಗೆ ದೂರು ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *