ಸಿಎಂ ಮುಂದೆ 25 ಬೇಡಿಕೆಗಳನ್ನ ಇಟ್ಟ ಪೊಲೀಸ್ ಸಿಬ್ಬಂದಿ

ಬೆಂಗಳೂರು: ವೇತನ ತಾರತಮ್ಯ ನಿವಾರಣೆ, ಪೊಲೀಸ್ ಕುಟುಂಬಗಳಿಗೆ ದೊರಕುವ ಸೌಲಭ್ಯ, ಹೀಗೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಕೆಳಹಂತದ ಪೊಲೀಸ್ ಸಿಬ್ಬಂದಿ ನಾಲ್ಕೈದು ವರ್ಷಗಳಿಂದ ಹೋರಾಟ ಮಾಡುತ್ತಾ ಮನವಿ ಪತ್ರವನ್ನ ಸಲ್ಲಿಸುತ್ತಾ ಬಂದಿದ್ದಾರೆ. ಈ ಬಾರಿ ಮಾರ್ಚ್ ತಿಂಗಳಲ್ಲಿ ಮಂಡನೆ ಆಗುವ 2020 -21ನೇ ಸಾಲಿನ ಬಜೆಟ್‍ನ್ನಲ್ಲಾದರೂ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪೊಲೀಸ್ ಸಿಬ್ಬಂದಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳ 95 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ. ಬೇರೆ ರಾಜ್ಯದ ಮಾದರಿಯಂತೆ ನಮಗೂ ಸೌಲಭ್ಯ ಕಲ್ಪಿಸಿ ಈ ಮನವಿ ಪತ್ರವನ್ನು ಖುದ್ದಾಗಿ ಓದಿ ನಿರ್ಧಾರ ತೆಗೆದುಕೊಂಡು ಬಜೆಟ್‍ನಲ್ಲಿ ಮಂಡಿಸಿ ಎಂದು ವಿನಮ್ರತೆಯಿಂದ ಬೇಡಿಕೊಂಡಿದ್ದಾರೆ.

ಬೇಡಿಕೆಗಳೇನು?
1. ರಾಘವೇಂದ್ರ ಔರಾದ್ಕರ್ ಅವರು ನೀಡಿರುವ ವರದಿಯನ್ನು ಪ್ರಸ್ತುತ ಬಜೆಟ್‍ನಲ್ಲಿ ಮಂಡಿಸಿ, ಇದಕ್ಕಾಗಿ 5,000 ಕೋಟಿ ರೂ. ಮೀಸಲು ಇಡಬೇಕು.

2. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪಾಲಿಗೆ ಮರಣ ಶಾಸನವಾಗಿರುವ ಹಳೆಯ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ, ಆ ಯೋಜನೆಯನ್ನು ಮೊದಲಿನಂತೆ ಸಂಪೂರ್ಣ ಯೋಜನೆಯಾಗಿ ಜಾರಿಮಾಡುವಂತೆ ಆಗ್ರಹ.

3. ನೂತನ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿದ ಕೂಡಲೇ ಏಪ್ರಿಲ್ 1, 2020ರಿಂದ ಜಾರಿಗೆ ಬರುವಂತೆ ಎಲ್ಲಾ ಸರ್ಕಾರಿ ನೌಕರರಿಗೆ ಜಿಪಿಎಫ್ ಸೌಲಭ್ಯ ಜಾರಿಗೆ ಗೊಳಿಸಲು ಮನವಿ.

4. ರಾಘವೇಂದ್ರ ಔರದ್ಕರ್ ವರದಿಯಂತೆ ಎಲ್ಲಾ ಪೊಲೀಸ್ ಸಿಬ್ಬಂದಿ ಮೂಲ ವೇತನದಲ್ಲಿ ಶೇ. 30ರಿಂದ 35ರಷ್ಟು ಹೆಚ್ಚಳ ಮಾಡಬೇಕು.

5. ಪೊಲೀಸ್ ಇಲಾಖೆಯಲ್ಲಿನ ಎಲ್ಲಾ ಅಧಿಕಾರಿಗಳ ವೇತನ ತೆಲಂಗಾಣ ರಾಜ್ಯದ ಮಾದರಿಯಲ್ಲಿ ಹೆಚ್ಚಾಳ ಮಾಡುವಂತೆ ಆಗ್ರಹ.

6. ತೆಲಂಗಾಣ ರಾಜ್ಯದ ಮಾದರಿಯಂತೆ ಹೊಸದಾಗಿ ಸೇರಿದ ಪೊಲೀಸ್ ಕಾನ್ಸ್‌ಟೇಬಲ್ ವೇತನವನ್ನ 45 ಸಾವಿರ ರೂಪಾಯಿ ಮಾಡುವಂತೆ ಬೇಡಿಕೆ.

7. ರಾಘವೇಂದ್ರ ಔರದ್ಕರ್ ಐಪಿಎಸ್, ಎಡಿಜಿಪಿ ಅವರ ವೇತನ ತಾರತಮ್ಯ ನಿವಾರಣ ಸಮಿತಿ ಮುಂದಿರುವ ಉಳಿದ ಹಣವನ್ನು ನೀಡುವುದರ ಬಗ್ಗೆ ಮನವಿ.

8. ಪೊಲೀಸ್ ಕಾನ್ಸ್‌ಟೇಬಲ್ ಗಳಿಗೆ ನೀಡುವ ಸಾರಿಗೆ ಭತ್ಯೆಯನ್ನು 600 ರಿಂದ 2,000 ರೂಪಾಯಿಗೆ ಹೆಚ್ಚಳ ಮಾಡುವಂತೆ ವಿನಂತಿ.

9. ಸ್ಪೆಷಲ್ ಕಿಟ್ ಭತ್ಯೆಯನ್ನು 40 ರೂಪಾಯಿಂದ 500 ರೂಪಾಯಿಗೆ ಹೆಚ್ಚಳ ಮಾಡುವಂತೆ ಆಗ್ರಹ.

10. ಪೋಲೀಸ್ ಕಾನ್ಸ್‌ಟೇಬಲ್ ಮತ್ತು ಹೆಡ್ ಕಾನ್ಸ್‌ಟೇಬಲ್ ನೋಡುವ ಪಡಿತರ ವಿತರಣಾ ಭತ್ಯೆಯನ್ನು 400 ರಿಂದ 4,000 ಸಾವಿರ ರೂಪಾಯಿ ಮಾಡುವಂತೆ ಮನವಿ.

11. ವಾಯುವ್ಯ ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಇರುವ ತಂತ್ರಾಂಶ ಆಧಾರಿತ ರಜೆಯ ನಿಯಮವನ್ನು ಪೊಲೀಸ್ ಇಲಾಖೆಯಲ್ಲಿ ಜಾರಿಗೆ ತರುವಂತೆ ಒತ್ತಾಯ.

12. ಅರ್ಥಿಕ ಇಲಾಖೆ ಮಂಜೂರು ಮಾಡುತ್ತಿರುವ ವಾರದ ರಜೆಯ ಭತ್ಯೆ 200 ರೂಪಾಯಿಯನ್ನು ರದ್ದು ಮಾಡಿ ಖಾಯಂ ರಜೆ ನೀಡವಂತೆ ಆಗ್ರಹ.

13. 2ನೇ ಶನಿವಾರ ಮತ್ತು 4 ನೇ ಶನಿವಾರದ ರಜೆಯ ಬದಲಾಗಿ ವಾರ್ಷಿಕವಾಗಿ ಒಂದು ತಿಂಗಳು ಹೆಚ್ಚುವರಿ ವೇತನವನ್ನು ನೀಡುವಂತೆ ಮನವಿ.

14. ಪೊಲೀಸ್ ಪೇದೆಯಿಂದ ಹಿಡಿದು ಪಿಎಸ್‍ಐವರೆಗೂ ಸರ್ಕಾರಿ ರಜೆ ದಿನಗಳ ಸಂಬಳವನ್ನು ನೀಡುವ ಬದಲು ಆ ದುಡ್ಡನ್ನು ವಿವಿಧ ಭತ್ಯೆಗಳನ್ನ ನೀಡಲು ಬಳಸಲಾಗ್ತಿದೆ. ಹೀಗಾಗಿ ಸರ್ಕಾರಿ ರಜೆ ದಿನಗಳ ಸಂಬಳ ನೀಡಿ ಮತ್ತು ಭತ್ಯೆಯೂ ನೀಡಬೇಕಾಗಿ ವಿನಂತಿ.

15. ಪೊಲೀಸ್ ಪೇದೆಯಿಂದ ಹಿಡಿದು ಪೊಲೀಸ್ ಇನ್ಸ್‌ಪೆಕ್ಟರ್‌ಗೆ ನೀಡುವ ಭ್ಯತ್ಯೆಯನ್ನು ಪರಿಷ್ಕರಿಸಿ ಹೆಚ್ಚಳ ಮಾಡುವಂತೆ ಮನವಿ.

16. ಕೇಂದ್ರದಲ್ಲಿ ಪೊಲೀಸ್ ಪೇದೆಯ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಒಂದು ಮಗುವಿಗೆ 25 ಸಾವಿರ ರೂಪಾಯಿ ನೀಡುವಂತೆ ರಾಜ್ಯದಲ್ಲೂ ಪೊಲೀಸ್ ಪೇದೆಯ ಮಕ್ಕಳಿಗೆ ಶಿಕ್ಷಣಕ್ಕೆ ಸಹಕರಿಸುವಂತೆ ಒತ್ತಾಯ.

17. ಪೊಲೀಸ್ ಪೇದೆ ಮತ್ತು ಹೆಡ್ ಕಾನ್ಸ್‌ಟೇಬಲ್ ಗಳ ನಿಶ್ಚಿತ ಪ್ರಯಾಣ ಭತ್ಯೆಯನ್ನು ಹೆಚ್ಚಳ ಮಾಡುವಂತೆ ಮನವಿ.

18. ಪ್ರತಿ ವರ್ಷ ಕನಿಷ್ಠ ಒಂದು ಸಲವಾದರೂ ಪೊಲೀಸ್ ಸಿಬ್ಬಂದಿ ಜೊತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸಭೆ ಮಾಡುವಂತೆ ಬೇಡಿಕೆ.

19. ಹಾಸನ ಜಿಲ್ಲಾ ಪೊಲಿಸ್ ಮಾದರಿಯಂತೆ ಪಿ.ಸಿ, ಹೆಚ್.ಸಿಗಳ ವಾರದ ರಜೆಯ ಭತ್ಯೆಯನ್ನು ಸಂಬಳದಲ್ಲಿ ಸೇರಿಸಿಕೊಡುವಂತೆ ಒತ್ತಾಯ.

20. ಪೊಲೀಸ್ ಸಿಬ್ಬಂದಿ ತಮ್ಮ ಕುಟುಂಬದ ಜೊತೆ ಒಂದು ತಿಂಗಳ ಕಾಲ ಉಚಿತವಾಗಿ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಸಂಚರಿಸಲು ಮನವಿ

21. ಪೊಲೀಸ್ ಪೇದೆ, ಎಎಸ್‍ಐ, ಹೆಚ್.ಸಿ ಕರ್ತವ್ಯದ ಮೇಲೆ ಸಂಚರಿಸಲು ಖಾಯಂ ಉಚಿತ ಬಸ್ ಸೇವೆಗೆ ಆಗ್ರಹ.

22. ಪೊಲೀಸ್ ಸಿಬ್ಬಂದಿಗೆ ಒಂದು ತಿಂಗಳ ಕುಟುಂಬದ ಜೊತೆ ಸಂಚಾರ ಮಾಡಲು ಉಚಿತ ರೈಲ್ವೆ ಪಾಸ್ ನೀಡುವಂತೆ ಮನವಿ.

23. ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಹೆಡ್ ಕಾನ್ಸ್‌ಟೇಬಲ್ ಗೆ ಕರ್ತವ್ಯದ ಮೇಲೆ ಸಂಚರಿಸಲು ಭಾರತದಾದ್ಯಂತ ಉಚಿತ ರೈಲ್ವೆ ಖಾಯಂ ಬಸ್ ಪಾಸ್ ನೀಡುವಂತೆ ಆಗ್ರಹ.

24. ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ 8 ಗಂಟೆಗಳ ಕಾಲ ಕರ್ತವ್ಯದ ಸಮಯ ನಿಗದಿಪಡಿಸುವಂತೆ ಮನವಿ.

25. ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು 8 ಗಂಟೆ ಮೀರಿ ಕೆಲಸ ಮಾಡಿದ್ದಲ್ಲಿ ಪ್ರತಿ ಗಂಟೆಗೆ 500 ರೂಪಾಯಿ ನೀಡುವಂತೆ ಒತ್ತಾಯ.

Comments

Leave a Reply

Your email address will not be published. Required fields are marked *