ಚಿಲ್ಲರೆ ಕಾಸಿಗಾಗಿ ಏರಿಯಾದಲ್ಲಿ ಕಿರಿಕ್ – ಪುಡಾರಿಯ ಪುಂಡಾಟಕ್ಕೆ ಖಾಕಿ ಬ್ರೇಕ್..!

ಬೆಂಗಳೂರು: ಭಾನುವಾರ ಬೆಳಗ್ಗೆ ಯಶವಂತಪುರದ ಪ್ಲಾಟಿನಂ ರಸ್ತೆಯಲ್ಲಿ ಜನಸಾಮಾನ್ಯರು ರಸ್ತೆಗಿಳಿಯುವ ಮುನ್ನವೇ ಪೊಲೀಸರು ರೌಡಿಶೀಟರ್ ಗೆ ಗುಂಡು ಹೊಡೆದಿದ್ದಾರೆ.

ಆರೋಪಿ ಗೌತಮ್ (22) ರೌಡಿಶೀಟರ್ ಪಟ್ಟಿಯಲ್ಲಿ ಸೇರಿ ಪೊಲೀಸರ ಗುಂಡೇಟು ತಿಂದಿದ್ದಾನೆ. ಇದೇ ತಿಂಗಳು 24ರಂದು ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೌತಮ್ ತನ್ನ ಸ್ನೇಹಿತರಾದ ಸಲ್ಮಾನ್, ಪ್ರಶಾಂತ್ ಜೊತೆ ಸೇರಿ ವಿನೋದ್ ಮತ್ತು ಮಾರುತಿ ಎಂಬವರಿಗೆ ಮಾರಣಾಂತಿಕವಾಗಿ ಚಾಕುವಿನಿಂದ ಇರಿದಿದ್ದ. ಈ ಸಂಬಂಧ ಮೂವರ ವಿರುದ್ಧ 307 ಕೇಸ್ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬೆನ್ನು ಹತ್ತಿದ ಪೊಲೀಸರು ಭಾನುವಾರ ಮುಂಜಾನೆ, ರೌಡಿ ಗೌತಮ್ ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ. ಇದಕ್ಕೂ ಮುನ್ನ ಗೌತಮ್ ಪೇದೆಗಳಾದ ಭಜಂತ್ರಿ ಮತ್ತು ಶಿವಕುಮಾರ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದನು.

ಕೊನೆಗೆ ಇನ್ಸ್ ಪೆಕ್ಟರ್ ಮುದ್ದುರಾಜ್ ಗುಂಡು ಹಾರಿಸಿ ಗೌತಮ್‍ನನ್ನ ಬಂಧಿಸಿದ್ದಾರೆ. ಗೌತಮ್‍ನನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಇಬ್ಬರಿಗಾಗಿ ಶೋಧಕಾರ್ಯ ನಡೆದಿದೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *