ರೇಣುಕಾಸ್ವಾಮಿ ಕೊಲೆ ಕೇಸಲ್ಲಿ 70% ಎಫ್‌ಎಸ್‌ಎಲ್ ವರದಿ ಕೈ ಸೇರಿದೆ: ಕಮಿಷನರ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 70% ಎಫ್‌ಎಸ್‌ಎಲ್‌ ವರದಿ ಪೊಲೀಸರ ಕೈ ಸೇರಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ತಿಳಿಸಿದ್ದಾರೆ.

ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣ ಬಗೆದಷ್ಟೂ ಆಳಕ್ಕಿಳಿಯುತ್ತಿದೆ. ಕೆದಕಿದಷ್ಟೂ ಸಾಕ್ಷ್ಯಗಳು ಹೊರಬೀಳುತ್ತಲೇ ಇವೆ. ಎಫ್‌ಎಸ್‌ಎಲ್‌ನ ಬಹುತೇಕ ಎಲ್ಲಾ ವರದಿಗಳು ಪೊಲೀಸರ ಕೈ ಸೇರಿದ್ದು, ಸದ್ಯ ಆರೋಪಿಗಳ ತಲೆಗೂದಲು ಸ್ಯಾಂಪಲ್ ವರದಿ ಖಾಕಿ ಕೈಗೆ ತಲುಪಿದೆ. ಇಬ್ಬರು ಆರೋಪಿಗಳಿಗೆ ಕೂದಲು ಸಂಕಷ್ಟ ತಂದೊಡ್ಡಿದ್ದು, ಕೊಲೆ ಮಾಡಿದ ಬಳಿಕ ರೇಣುಕಾಸ್ವಾಮಿ ಶವವನ್ನು ಬಿಸಾಡುವಾಗ ಸ್ಕಾರ್ಪಿಯೋ ಕಾರಲ್ಲಿ ನಾಲ್ವರು ಆರೋಪಿಗಳು ಹೋಗಿದ್ರು. ಆ ಸ್ಕಾರ್ಪಿಯೋ ಕಾರಲ್ಲಿ ಆರೋಪಿಗಳ ಕೂದಲು ಉದುರಿತ್ತು. ಅದನ್ನು ಸಂಗ್ರಹಿಸಿ ಡಿಎನ್‌ಎ ಟೆಸ್ಟ್‌ಗೆ ಕಳುಹಿಸಲಾಗಿತ್ತು. ಈಗ ಡಿಎನ್‌ಎ ವರದಿ ಬಂದಿದ್ದು ಇಬ್ಬರು ಆರೋಪಿಗಳ ಕೂದಲು ಮ್ಯಾಚ್ ಆಗಿದೆ. ಸದ್ಯ ತನಿಖೆ ಅಂತಿಮ ಘಟ್ಟ ತಲುಪಿದ್ದು, ಶೀಘ್ರವೇ ಚಾರ್ಜ್‌ಶೀಟ್‌ ಸಲ್ಲಿಕೆಯಾಗಲಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ & ಗ್ಯಾಂಗ್ ಕೂದಲು ಸ್ಯಾಂಪಲ್ ಡಿಎನ್‌ಎ ವರದಿಗೆ ಮ್ಯಾಚ್

ಮರ್ಡರ್ ಕೇಸ್ ಸಂಬಂಧ ಪೊಲೀಸರು ನಾಲ್ಕು ಕ್ರೈಂ ಸೀನ್‌ಗಳನ್ನ ಗುರುತಿಸಿ ಬರೋಬ್ಬರಿ 160ಕ್ಕೂ ಹೆಚ್ಚು ಸಾಕ್ಷ್ಯಗಳನ್ನ ಸಂಗ್ರಹಿಸಿದ್ದಾರೆ. ಹಲವರ ಹೇಳಿಕೆಗಳನ್ನ ಪೊಲೀಸರು ದಾಖಲಿಸಿಕೊಂಡಿದ್ದಾರೆ.‌ ಇದರಿಂದ ದರ್ಶನ್ (Darshan) & ಗ್ಯಾಂಗ್‌ಗೆ ಮತ್ತಷ್ಟು ಢವಢವ ಶುರುವಾಗಿದೆ. ಹಾಗಾದರೆ, ಆ 4 ಕ್ರೈಂ ಸೀನ್‌ಗಳ್ಯಾವುದು?

ಕ್ರೈಂ ಸೀನ್ ನಂ.1
ಸ್ಥಳ- ಚಿತ್ರದುರ್ಗ
* ರೇಣುಕಾಸ್ವಾಮಿ ಕೆಲಸ ಮಾಡುತ್ತಿದ್ದ ಮೆಡಿಕಲ್ ಸ್ಟೋರ್
* ಆತ ಆಟೋದಲ್ಲಿ ಹೋಗಿ ಆರೋಪಿಗಳನ್ನು ಭೇಟಿಯಾದ ಸ್ಥಳ
* ರೇಣುಕಾಸ್ವಾಮಿಯನ್ನು ರಾಘವೇಂದ್ರ & ಗ್ಯಾಂಗ್ ಕಾರಿಗೆ ಹತ್ತಿಸಿಕೊಂಡ ಸ್ಥಳ
* ಬೆಂಗಳೂರಿಗೆ ಬರುವ ವೇಳೆ ಭೇಟಿ ಕೊಟ್ಟಿದ್ದ ಹೋಟೆಲ್

ಕ್ರೈಂ ಸೀನ್ ನಂ.2
ಸ್ಥಳ- ಪಟ್ಟಣಗೆರೆ ಶೆಡ್
* ಪಟ್ಟಣಗೆರೆ ಶೆಡ್‌ನ ಸೆಕ್ಯೂರಿಟಿ ಗಾರ್ಡ್‌ಗಳು
* ಶೆಡ್‌ನ ಮಾಲೀಕರು & ಸಿಬ್ಬಂದಿ
* ಕೊಲೆ ನಂತರ ಆರೋಪಿಗಳು ಭೇಟಿಯಾಗಿದ್ದವರು
* ಶೆಡ್‌ನಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಆರೋಪಿಗಳ ಸಂಪರ್ಕದಲ್ಲಿದ್ದವರು

ಕ್ರೈಂ ಸೀನ್ ನಂ.3
ಸ್ಥಳ- ಸ್ಟೋನಿ ಬ್ರೂಕ್ ಪಬ್

* ಸ್ಟೋನಿ ಬ್ರೂಕ್ ಪಬ್‌ನ ಸಿಬ್ಬಂದಿ
* ಪಬ್‌ನ ಸೆಕ್ಯೂರಿಟಿ ಗಾರ್ಡ್‌ಗಳು
* ಪಬ್‌ಗೆ ಬಂದಿದ್ದ ಗ್ರಾಹಕರ ಡಿಟೇಲ್ಸ್
* ಪಬ್‌ಗೆ ಬಂದಿದ್ದ ದರ್ಶನ್ ಕೆಲ ಆಪ್ತರು

ಕ್ರೈಂ ಸೀನ್:- ನಂ.4
ಸ್ಥಳ- ಸುಮ್ಮನಹಳ್ಳಿ ರಾಜಕಾಲುವೆ
* ರಾಜಕಾಲುವೆ ಬಳಿಯ ಅಪಾರ್ಟ್ಮೆಂಟ್ ಸೆಕ್ಯೂರಿಟಿ
* ಬೆಳಗಿನ ಜಾವ ರೇಣುಕಾಸ್ವಾಮಿ ಶವ ನೋಡಿದ ಸಾರ್ವಜನಿಕರು
* ಶವ ಸಾಗಿಸಿದ ವಾಹನ ಬಂದು ಹೋಗಿದ್ದನ್ನು ನೋಡಿದ್ದ ಸಿಬ್ಬಂದಿ

17 ಆರೋಪಿಗಳ ಪ್ರತ್ಯೇಕ ಪ್ರೊಫೈಲ್ ಸಿದ್ಧಪಡಿಸಲು ಪೊಲೀಸರು ಮುಂದಾಗಿದ್ದಾರೆ. ಹುಟ್ಟಿದ್ದು ಯಾವಾಗ ಎನ್ನುವುದರಿಂದ ಹಿಡಿದು ಇಲ್ಲಿವರೆಗೂ ನಡೆದ ಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆರೋಪಿಗಳ ಆದಾಯ ಏನು? ಏನ್ ಕೆಲಸ ಮಾಡ್ತಾ ಇದ್ದಾರೆ? ಯಾವ ವಿಳಾಸದಲ್ಲಿ ಇದ್ದಾರೆ?, ಜೊತೆಗೆ ಯಾವ ಆರೋಪಿ ವಿರುದ್ದ ಯಾವ ಸಾಕ್ಷ್ಯ ಇದೆ? ಅನ್ನೋದನ್ನು ಕೆದಕುತ್ತಿದ್ದಾರೆ. ಒಬ್ಬೊಬ್ಬರದ್ದೇ ಪ್ರತ್ಯೇಕ ಪ್ರೊಫೈಲ್ ಸಿದ್ದ ಮಾಡುತ್ತಿರುವುದಾಗಿ ಕೋರ್ಟ್‌ಗೆ ಮಾಹಿತಿ ಕೊಟ್ಟಿದ್ದಾರೆ.

ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ 2 ತಿಂಗಳು ಮುಗಿದಿದೆ. ಜೈಲು ಸೇರುವ ಮುನ್ನ ಟ್ರಿಪ್, ಪಬ್, ಶೂಟಿಂಗ್ ಅಂತಾ ಇದ್ದ ದಾಸನಿಗೆ ಈಗ ಜೈಲಿನಲ್ಲಿ ಒಂದೇ ಕಡೆ ಇರೋಕೆ ಕಷ್ಟವಾಗುತ್ತಿದೆಯಂತೆ. ಹೀಗಾಗಿ ಪದೇ ಪದೇ ಅಕ್ಕಪಕ್ಕದ ಕೈದಿಗಳ ಜೊತೆ ಮಾತನಾಡೋದಾಗಿ ಸಿಬ್ಬಂದಿ ಬಳಿ ಕೇಳಿಕೊಂಡಿದ್ದಾರೆ. ಇದಕ್ಕೆ ಸಿಬ್ಬಂದಿ ಒಪ್ಪದೇ ಇದ್ದಾಗ ಅವರ ಮೇಲೆ ಕಾಟೇರ ಗರಂ ಆಗಿದ್ದಾರಂತೆ.