ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳಿಗೆ ಪೊಲೀಸರಿಂದ ಫೈರಿಂಗ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸ್ ಪಿಸ್ತೂಲ್ ಸದ್ದು ಮಾಡಿದ್ದು, ಹಂತಕರಿಬ್ಬರ ಕಾಲಿಗೆ ಪೊಲೀಸರು ಗುಂಡು ಹೊಡೆದಿರುವ ಘಟನೆ ನಂದಿನಿ ಲೇಔಟ್‍ನಲ್ಲಿ ನಡೆದಿದೆ.

ಚಂದನ್ ಎಬಿಸಿಡಿ ಚಂದ್ರು ಮತ್ತು ರೋಹಿತ್ ಕಾಲಿಗೆ ನಂದಿನಿ ಲೇಔಟ್ ಪೊಲೀಸರು ಗುಂಡು ಹೊಡೆದಿದ್ದಾರೆ. ಈ ಘಟನೆ ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಕೆ.ಡಬ್ಲೂ ಲೇಔಟ್‍ನಲ್ಲಿ ನಡೆದಿದೆ. ಇದೇ ತಿಂಗಳು 21 ರಂದು ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಮಾ ಮಾಹೇಶ್ವರ್ ಎಂಬವರನ್ನ ಕೊಲೆ ಮಾಡಿ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದರು.

ಆರೋಪಿಗಳ ಬಗ್ಗೆ ಖಚಿತ ಮಾಹಿತಿ ತಿಳಿದ ನಂದಿನಿ ಲೇಔಟ್ ಇನ್ಸ್‌ಪೆಕ್ಟರ್ ಲೋಹಿತ್ ಬಂಧಿಸಲು ಹೋಗಿದ್ದಾರೆ. ಆದರೆ ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಲೋಹಿತ್ ಆತ್ಮರಕ್ಷಣೆಗಾಗಿ ಹಂತಕರ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಈ ಘಟನೆಯಲ್ಲಿ ಪಿಎಸ್‍ಐ ನಿತ್ಯಾನಂದ ಹಾಗೂ ಪೇದೆ ಬಸವಣ್ಣ ಅವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇತ್ತ ಹತ್ಯೆ ಮಾಡಲು ಸುಪಾರಿ ಪಡೆದಿದ್ದ ಆರೋಪಿಯ ಕಾಲಿಗೆ ಪೀಣ್ಯ ಇನ್ಸ್‌ಪೆಕ್ಟರ್ ಮುದ್ದು ರಾಜು ಗುಂಡು ಹೊಡೆದಿದ್ದಾರೆ. ಪ್ರಭು ತಮಿಳು ಎಂಬವನ ಕಾಲಿಗೆ ಇನ್ಸ್‌ಪೆಕ್ಟರ್ ಗುಂಡು ಹೊಡೆದಿದ್ದಾರೆ.

ಆರೋಪಿ ಪ್ರಭು, ನಾಗೇಶ್ ಎಂಬವರಿಂದ ಸುಪಾರಿ ಪಡೆದು ಇದೇ ತಿಂಗಳ 6ರಂದು ಸೋಮಣ್ಣ ಎಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಅಷ್ಟೇ ಅಲ್ಲದೇ ರಾತ್ರಿ ವೇಳೆ ರಾಬರಿ ಮಾಡಿದ್ದನು. ಪೊಲೀಸರು ಆರೋಪಿಯನ್ನ ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದನು. ಆಗ ಇನ್ಸ್‌ಪೆಕ್ಟರ್ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *