ನಲಪಾಡ್ ಹಲ್ಲೆ ಪ್ರಕರಣ- ಯುಬಿ ಸಿಟಿಯ ಫರ್ಜಿ ಕೆಫೆಗೆ ರೀ ಓಪನ್ ಭಾಗ್ಯ

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ನಲಪಾಡ್, ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ಯುಬಿ ಸಿಟಿಯ ಫರ್ಜಿ ಕೆಫೆಯ ರೆಸ್ಟೋರೆಂಟ್ ರೀ ಓಪನ್ ಮಾಡಲು ಪೊಲೀಸರು ಅನುಮತಿ ನೀಡಿದ್ದಾರೆ.

ನಲಪಾಡ್ ಪ್ರಕರಣದ ವಿವಾದಿತ ಕೇಂದ್ರಬಿಂದು ಯುಬಿ ಸಿಟಿಯ ಫರ್ಜಿ ಕೆಫೆ ರೀ ಓಪನ್ ಮಾಡಲು ಕಬ್ಬನ್ ಪಾರ್ಕ್ ಪೋಲೀಸರು ಅನುಮತಿ ನೀಡಿದ್ದು, ಹಲವು ಷರತ್ತುಗಳನ್ನು ವಿಧಿಸಿದ್ದಾರೆ.

ಷರತ್ತುಗಳು ಈ ಕೆಳಗಿನಂತಿವೆ.
1. ಕೆಫೆಯ ಒಳಗೆ ಧೂಮಪಾನಕ್ಕೆ ಅವಕಾಶ ನೀಡಬಾರದು.
2. ಎಷ್ಟು ಟೇಬಲ್‍ಗಳು ಇರುತ್ತವೆಯೋ ಅದಕ್ಕಿಂತ ಒಬ್ಬನೇ ಒಬ್ಬ ವ್ಯಕ್ತಿ ಕೂಡ ಹೆಚ್ಚಿಗೆ ಒಳಗೆ ಇರುವಂತಿಲ್ಲ.
3. ಗಲಾಟೆಗಳಾದಂತಹ ಸಂದರ್ಭದಲ್ಲಿ ಕೂಡಲೇ ಪೋಲೀಸರಿಗೆ ಮಾಹಿತಿ ನೀಡಬೇಕು.

ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಹಲ್ಲೆಯಾದ ಬಳಿಕ ಪೊಲೀಸರು ಕೆಫೆಯನ್ನು ಕ್ಲೋಸ್ ಮಾಡಿದ್ದರು. ಸದ್ಯ ಪೊಲೀಸರು ಕೆಲವು ಷರತ್ತುಗಳನ್ನು ವಿಧಿಸಿ ಕೆಫೆ ತೆರೆಯಲು ಅನುಮತಿ ನೀಡಿದ್ದಾರೆ.

ಏನಿದು ಪ್ರಕರಣ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಕಿರಿಕ್ ತೆಗೆದು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದನು. ಫೆಬ್ರವರಿ 17ರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯಾ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.

Comments

Leave a Reply

Your email address will not be published. Required fields are marked *