ಬಂಧಿಸಲು ಹೋದಾಗ ಮುಗಿಬಿದ್ದ ರೌಡಿ – ಗುಂಡು ಹಾರಿಸಿ ಆಸ್ಪತ್ರೆಗೆ ಸೇರಿಸಿದ ಪೊಲೀಸ್ರು

ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿದೆ. ಬಂಧಿಸಲು ಹೋದಾಗ ರೌಡಿಯೊಬ್ಬ ಮುಗಿಬಿದ್ದ ಪರಿಣಾಮ ಪೊಲೀಸರು ಆತನಿಗೆ ಗುಂಡು ಹಾರಿಸಿದ್ದಾರೆ.

ಬಿನ್ನಮಿಲ್ ಕ್ಯಾಂಟೀನ್ ಬಳಿ ಈ ಘಟನೆ ನಡೆದಿದೆ. ರೌಡಿ ಶೀಟರ್ ಕಿರಣ್ ಅಲಿಯಾಸ್ ಕಿರ್ಬ ಗುಂಡೇಟಿನಿಂದ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೆ.ಪಿ ಅಗ್ರಹಾರ ಇನ್ಸ್ ಪೆಕ್ಟರ್ ಎಸ್.ಎಸ್. ಮಂಜು ಅವರು ಆರೋಪಿಗೆ ಗುಂಡು ಹಾರಿಸಿದ್ದಾರೆ. ಇದನ್ನು ಓದಿ: ರಾಜಕೀಯ ದ್ವೇಷ: ಕಾಂಗ್ರೆಸ್ ಕಚೇರಿಯಲ್ಲಿನ ವಸ್ತುಗಳ ನಾಶ – 25ಕ್ಕೂ ಹೆಚ್ಚು ವಾಹನಗಳ ಗಾಜು ಪೀಸ್‍ ಪೀಸ್

ಹೇಗಾಯಿತು?:
ರೌಡಿ ಶೀಟರ್ ಕಿರಣ್ ಅಲಿಯಾಸ್ ಕಿರ್ಬ ಮತ್ತು ಆತನ ಗ್ಯಾಂಗ್ ಇದೇ ತಿಂಗಳ 25ರ ರಾತ್ರಿ ಚೋಳೂರುಪಾಳ್ಯ ಮತ್ತು ಕೆ.ಪಿ ಅಗ್ರಹಾರದಲ್ಲಿ ದಾಂಧಲೆ ನಡೆಸಿದ್ದರು. ಸುಮಾರು 25 ಕ್ಕೂ ಹೆಚ್ಚು ವಾಹನಗಳ ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿದ್ದರು. ಅಷ್ಟೇ ಅಲ್ಲದೇ ಕಾಂಗ್ರೆಸ್ ಕಚೇರಿಗೆ ನುಗ್ಗಿ ಅಲ್ಲಿ ಧ್ವಂಸ ಮಾಡಿ, ಇನ್ನು ಮುಂದೆ ಕಚೇರಿ ಓಪನ್ ಮಾಡದಂತೆ ಬೆದರಿಸಿ ಮಚ್ಚು ಬಿಸಾಕಿದ್ದರು. ಬಳಿಕ ಈ ಬಗ್ಗೆ ಪೊಲೀಸರು ಗಂಭೀರವಾಗಿ ವಿಚಾರಣೆ ಮಾಡಿ ಅವರನ್ನು ಬಂಧಿಸಲು ಮುಂದಾಗಿದ್ದರು.

ಪೊಲೀಸರು ಆರೋಪಿಗಳಿರುವ ಬಗ್ಗೆ ಮಾಹಿತಿ ತಿಳಿದುಕೊಂಡು ಇಂದು ಬೆಳಗಿನ ಜಾವ ಬಿನ್ನಿಮಿಲ್ ಬಳಿ ಬಂಧಿಸಲು ಹೋಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರು ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಆರೋಪಿ ಕಿರ್ಬಾ ಬಂಧಿಸಲು ಹೋಗಿದ್ದ ಹೆಡ್ ಕಾನ್ ಸ್ಟೇಬಲ್ ನಾಗರಾಜಪ್ಪ ಕೈಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಆಗ ಆರೋಪಿಗಳ ಪೈಕಿ ಒಬ್ಬನ ಕಾಲಿಗೆ ಇನ್ಸ್ ಪೆಕ್ಟರ್ ಎಸ್.ಎಸ್. ಮಂಜು ಅವರು ಗುಂಡು ಹಾರಿಸಿದ್ದಾರೆ.

ಸದ್ಯಕ್ಕೆ ಗುಂಡೇಟು ತಿಂದಿದ್ದ ಆರೋಪಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *