ರಾಮನಗರ ಪೊಲೀಸರಿಂದ ರೌಡಿಶೀಟರ್ ಮೇಲೆ ಫೈರಿಂಗ್

ರಾಮನಗರ: ಬೆಳ್ಳಂಬೆಳಗ್ಗೆ ರಾಮನಗರ ಜಿಲ್ಲಾ ಪೊಲೀಸರಿಂದ ರೌಡಿಶೀಟರ್ ಮೇಲೆ ಫೈರಿಂಗ್ ನಡೆದಿದೆ.

ರೌಡಿಶೀಟರ್ ಸೈಲೆಂಟ್ ಸುನೀಲನ ಶಿಷ್ಯನ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ರೌಡಿಶೀಟರ್ ರೇಣುಕಾ ಪ್ರಸಾದ್ ಅಲಿಯಾಸ್ ನರಿ ಗುಂಡೇಟು ತಿಂದ ಆರೋಪಿ. ಅಂದಹಾಗೆ 4-5 ಕೊಲೆ ಪ್ರಕರಣದಲ್ಲಿ ರೌಡಿಶೀಟರ್ ರೇಣುಕಾ ಪ್ರಸಾದ್ ಪೊಲೀಸರಿಗೆ ಬೇಕಾಗಿದ್ದನು. ಇತ್ತೀಚೆಗೆ ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದನು.

ತಡರಾತ್ರಿ ಬೆಂಗಳೂರು ದಕ್ಷಿಣ ತಾಲೂಕಿನ ಚಂದ್ರಪ್ಪ ಸರ್ಕಲ್ ಬಳಿಯ ಬಾರ್ ವೊಂದರಲ್ಲಿ ಕುಡಿದು ಗಲಾಟೆ ಮಾಡಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ 70 ಸಾವಿರ ದೋಚಿ ಪರಾರಿಯಾಗಿದ್ದನು. ನಂತರ ಕುಂಬಳಗೂಡು ಸಮೀಪದ ವಿನಾಯಕನಗರದ ಶ್ರೀನಿಧಿ ಲಾಡ್ಜ್ ನಲ್ಲಿ ಅವಿತಿದ್ದ ರೌಡಿಶೀಟರ್ ರೇಣುಕಾ ಪ್ರಸಾದ್‍ನನ್ನು ಹಿಡಿಯಲು ತೆರಳಿದ್ದ ಮಾಗಡಿ ಸರ್ಕಲ್ ಇನ್ಸ್ ಪೆಕ್ಟರ್ ರವಿ ಹಾಗೂ ಸಿಬ್ಬಂದಿ ಮೇಲೆ ಡ್ರ್ಯಾಗರ್ ನಿಂದ ಹಲ್ಲೆಗೆ ಮುಂದಾಗಿ ಪೇದೆ ಹುಲಿರಾಯ ಎಂಬವರಿಗೆ ಇರಿದಿದ್ದಾನೆ.

ಈ ವೇಳೆ ಆತ್ಮರಕ್ಷಣೆಗಾಗಿ ಸಿಪಿಐ ರವಿ ಅವರು ರೌಡಿಶೀಟರ್ ರೇಣುಕಾ ಪ್ರಸಾದ್‍ನ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗುಂಡೇಟು ತಿಂದ ರೌಡಿಶೀಟರ್ ರೇಣುಕಾ ಪ್ರಸಾದ್‍ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹಾಗೂ ಗಾಯಗೊಂಡ ಪೇದೆ ಹುಲಿರಾಯನನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ರಾಮನಗರ ಎಸ್‍ಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *