ಡಿವೋರ್ಸ್ ನೀಡಲು ಪತ್ನಿ ನಿರಾಕರಣೆ -ಪೊಲೀಸಪ್ಪನ ಸಂಬಂಧಿಕರಿಂದ ಗೂಂಡಾಗಿರಿ

ಬೆಳಗಾವಿ: ವಿಚ್ಛೇದನ ನೀಡಲು ನಿರಾಕರಿಸಿದ ಪತ್ನಿ ಮೇಲೆ ಪೊಲೀಸಪ್ಪನ ಸಂಬಂಧಿಕರು ಗೂಂಡಾಗಿರಿ ನಡೆಸಿದ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ನಾಗನೂರ ತಾಂಡಾದಲ್ಲಿ ನಡೆದಿದೆ.

ಪೊಲೀಸ್ ಪೇದೆ ರಾಜೇಶ್ ಲಮಾಣಿ ಸಂಬಂಧಿಕರು ಗೂಂಡಾವರ್ತನೆ ತೋರಿದ್ದಾರೆ. ರಾಜೇಶ್ ಲಮಾಣಿ ಮತ್ತು ಲಲಿತಾ ಲಮಾಣಿಗೆ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು. ಬೆಂಗಳೂರಿನಲ್ಲಿ ಪೇದೆಯಾಗಿ ಕೆಲಸ ನಿರ್ವಹಿಸುತ್ತಿರುವ ರಾಜೇಶ್, ವಿಚ್ಛೇದನ ಕೊಡುವಂತೆ ಪತ್ನಿಗೆ ಆಗಾಗ ಬೆದರಿಕೆ ಹಾಕುತ್ತಿದ್ದನು.

ಆದರೆ ಲಲಿತಾ ಲಮಾಣಿ ವಿಚ್ಛೇದನ ಕೊಡಲು ಒಪ್ಪಲಿಲ್ಲ. ಆದ್ದರಿಂದ ರಾಜೇಶ್ ಸಂಬಂಧಿಕರು ಲಲಿತಾ ಮನೆಗೆ ನುಗ್ಗಿ ಗೂಂಡಾಗಿರಿ ನಡೆಸಿದ್ದಾರೆ. ಈ ಘಟನೆಯಲ್ಲಿ ಲಲಿತಾ ಅವರ ಗರ್ಭಿಣಿ ಅಕ್ಕ, ಅಮ್ಮನಿಗೆ ಗಾಯವಾಗಿದೆ. ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸಪ್ಪನ ಸಂಬಂಧಿಕರು ಹಲ್ಲೆ ಮಾಡುತ್ತಿರುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಈ ಬಗ್ಗೆ ದೂರು ದಾಖಲಿಸಲು ರಾಮದುರ್ಗ ಪೊಲೀಸ್ ಠಾಣೆಗೆ ಹೋದರೆ, ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ಲಲಿತಾ ಪೋಷಕರು ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *