ತಪ್ಪು ಮಾಡದಿದ್ದರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು!

ಬಾಗಲಕೋಟೆ: ಯುವಕನ ಮೇಲೆ ಪೊಲೀಸರು ಹಲ್ಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ. ರಾತ್ರಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನೇಕಾರಪರ್ವ ಕಾರ್ಯಕ್ರಮದ ವೇಳೆ ಹಲ್ಲೆ ನಡೆದಿದೆ.

ಕುಮಾರಸ್ವಾಮಿ ನೇಕಾರಪರ್ವ ಕಾರ್ಯಕ್ರಮಕ್ಕೆ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಮುಂಜುನಾಥ್ ಎಂಬ ಯುವಕ ಹಾಜರಾಗಿದ್ದ. ಈ ವೇಳೆ ವೇದಿಕೆ ಮುಂದೆ ಕುಳಿತುಕೊಳ್ಳುವುದ್ದಕ್ಕೆ ಮಂಜುನಾಥ್ ಹೋಗುತ್ತಾರೆ. ಇದಕ್ಕೆ ಅವಕಾಶ ನೀಡದ ಪೊಲೀಸರು ಆತನನ್ನು ತಡೆಯುತ್ತಾರೆ.

ಹಿಂದೆ ಖುರ್ಚಿಗಳಿಲ್ಲ ನಾನು ಮುಂದೆ ಕೂರುತ್ತೇನೆ ಬಿಡಿ ಎಂದು ಮಂಜುನಾಥ್ ಕೇಳಿಕೊಳ್ಳುತ್ತಾರೆ. ಆದರೆ ಪೊಲೀಸರು ಒಳಗೆ ಬಿಡೋದಿಲ್ಲ ಆಗ ಅಣ್ಣ ಅಣ್ಣ ಕುಮಾರಣ್ಣ ನಮ್ಮ ಅಣ್ಣ ಹನುಮಂತಣ್ಣ ಎಂದು ಕುಮಾರಸ್ವಾಮಿ ಮತ್ತು ಬಾದಾಮಿ ಜೆಡಿಎಸ್ ಅಭ್ಯರ್ಥಿ ಹೆಸರನ್ನು ಮಂಜುನಾಥ ಘೋಷಣೆ ಕೂಗೋಕೆ ಶುರು ಮಾಡಿದ್ದರು.

ಈ ವೇಳೆ ಆತನನ್ನು ಹೊರ ಕರೆದ ನಾಲ್ವರು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯುವಕ ನಾನೇನು ತಪ್ಪು ಮಾಡಿದ್ದೇನೆ ಸರ್ ಯಾಕೆ ಹೊಡೆಯುತ್ತಿದ್ದೀರಿ ಎಂದು ಪದೇ ಪದೇ ಕೇಳಿಕೊಂಡರು ಬಿಡದೆ ಬಾರಿಸಿದ್ದಾರೆ. ಒಂದು ಕಡೆ ಕುಮಾರಸ್ವಾಮಿ ಕಾರ್ಯಕ್ರಮ ನಡೆಯುತ್ತಿದ್ದರೆ ವೇದಿಕೆ ಬಳಿ ಪೊಲೀಸರು ಈ ಯುವಕನ ಮೇಲೆ ದೌರ್ಜನ್ಯ ನಡೆಸಿದ್ದಾರೆ.

ಪೊಲೀಸರು ಥಳಿಸಿದ್ದರಿಂದ ಯುವಕನ ಮೈಮೇಲೆ ಬಾಸುಂಡೆಗಳು ಕಾಣಿಸಿಕೊಂಡಿವೆ. ಯುವಕ ನಾನೇನು ತಪ್ಪು ಮಾಡಿಲ್ಲ ಪೊಲೀಸರೇ ನನಗೆ ಅವಾಚ್ಯ ಶಬ್ಧದಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಂಜುನಾಥ್ ಕುಡಿದಿದ್ದ ವೇದಿಕೆ ಮುಂದೆ ಹೋಗಲು ಪ್ರಯತ್ನಿಸುತ್ತಿದ್ದ ಇದನ್ನು ತಡೆದಿದ್ದಕ್ಕೆ ಪಿಎಸ್‍ಐ ಅವರಿಗೆ ಅವಾಚ್ಯ ಶಬ್ಧದಿಂದ ಬೈದಾಡಿದ ಎಂದು ಪೊಲೀಸರು ಸಮರ್ಥನೆ ಮಾಡಿಕೊಂಡಿದ್ದಾರೆ.

ಅದೇನೆ ಇದ್ದರೂ ಜನರ ಮಧ್ಯದಲ್ಲೇ ಈ ಯುವಕನ ಮೇಲೆ ದಬ್ಬಾಳಿಕೆ ಮಾಡಿದ್ದು ಸರಿಯಲ್ಲ ಎಂದು ಸಾರ್ವಜನಿಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕ ನನ್ನ ತಪ್ಪಿದ್ದರೆ ಹೊಡೆಯಲಿ ಏನೂ ಮಾಡದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *