ರೇಷ್ಮಾ ಪಡೇಕನೂರ ಕೊಲೆ ಪ್ರಕರಣ- ಆರೋಪಿ ಬಂಧನ

ವಿಜಯಪುರ: ಜೆಡಿಎಸ್‍ನ ವಿಜಯಪುರ ಮಾಜಿ ಜಿಲ್ಲಾಧ್ಯಕ್ಷೆ, ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಹತ್ಯೆಯ ಆರೋಪಿ ಕೊನೆಗೂ ಪೊಲೀಸರ ಬಲೆ ಬಿದ್ದಿದ್ದಾನೆ.

ತೌಫಿಕ್ ಶೇಕ್ ಅಲಿಯಾಸ್ ಪೈಲ್ವಾನ್ ಬಂಧಿತ ಆರೋಪಿ. ಈತನನ್ನು ಪೊಲೀಸರು ಧೂಳಖೇಡ ಗ್ರಾಮದ ಬಳಿ ಬಂಧಿಸಿದ್ದಾರೆ. ಸೊಲ್ಲಾಪುರದ ಎಂಐಎಂ ಮುಖಂಡ ತೌಫಿಕ್ ಶೇಕ್ ಮೇ 17 ರಂದು ರೇಷ್ಮಾ ಪಡೇಕನೂರನ್ನು ವಿಜಯಪುರದ ಕೋಲ್ಹಾರ ಸೇತುವೆ ಕೆಳಗೆ ಹತ್ಯೆ ಮಾಡಿದ್ದಾನೆ ಆರೋಪ ಕೇಳಿ ಬಂದಿದೆ.

ಬಸವನಬಾಗೇವಾಡಿ ಸಿಪಿಐ ಮಹದೇವ ಶಿರಹಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ರೇಷ್ಮಾ ಪತಿ ಖಾಜಾ ಬಂದೇ ನವಾಜ್ ಸೊಲ್ಲಾಪುರದ ಎಂಐಎಂ ಮುಖಂಡ ತೌಫಿಕ್ ಶೇಖ್ ಊರ್ಫ್ ಪೈಲ್ವಾನ್ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ತೌಫಿಕ್ ವಿರುದ್ಧ ಐಪಿಸಿ ಸೆಕ್ಷನ್ 302, 201 ಅಡಿಯಲ್ಲಿ ಕೇಸ್ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಡಿವೈಎಸ್‍ಪಿ ಮಟ್ಟದಲ್ಲಿ ಬಸವನ ಬಾಗೇವಾಡಿ ಡಿಎಸ್‍ಪಿ ಮಹೇಶ್ವರಗೌಡ ಹಾಗೂ ವಿಜಯಪುರ ಡಿಎಸ್‍ಪಿ ಅಶೋಕ್ ನೇತೃತ್ವದಲ್ಲಿ ಎರಡು ತಂಡಗಳ ರಚನೆ ಮಾಡಲಾಗಿತ್ತು.

ಕೆಲವು ದಿನ ಹಿಂದೆ ಕೊಲೆಗೂ ಮುನ್ನ ರೇಷ್ಮಾ ಅವರು ಆಪ್ತ ಸಮೀವುಲ್ಲಾ ಜೊತೆಗೆ ಪೈಲ್ವಾನ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಫುಲ್ ವೈರಲ್ ಆಗಿತ್ತು. ಆಡಿಯೋದಲ್ಲಿ ತೌಫಿಕ್ ಪೈಲ್ವಾನ್ ಜೊತೆಗಿನ ಹಣದ ವ್ಯವಹಾರದ ಕುರಿತು ರೇಷ್ಮಾ ಹಾಗೂ ಸಮೀವುಲ್ಲಾ ಮಾತನಾಡಿದ್ದರು. ‘ತೌಫಿಕ ಪೈಲ್ವಾನ್ ಸಾವು ಬದುಕಿನ ನಡುವೆ ಜೀವನ ಮಾಡಬೇಕು. ಸಾಯಲು ಬಾರದು, ಜೀವಂತವಾಗಿನೂ ಇರಬಾರದು ಎಂದು ರೇಷ್ಮಾ ಬಿಡುಗಡೆಯಾದ ಆಡಿಯೋದಲ್ಲಿ ಹೇಳಿದ್ದರು.

ಎಂಐಎಂ ಮುಖಂಡ ತೌಫಿಕ್ ಪೈಲ್ವಾನ್ ಹೇಡಿ. ಇಂದಿಗೂ ಒಂದು ಮರ್ಡರ್ ಆಗಲಿ, ಹಾಫ್ ಮರ್ಡರ್ ಆಗಲಿ ಮಾಡಿಲ್ಲ. ಅವನೊಬ್ಬ ರಾಜಕೀಯ ವ್ಯಕ್ತಿಯೆಂದು ಸುಮ್ಮನೆ ಇದ್ದೇನೆ ಎಂದು ರೇಷ್ಮಾ ಹೇಳಿರುವುದು ಆಡಿಯೋದಲ್ಲಿ ರೆಕಾರ್ಡ್ ಆಗಿತ್ತು. ಹೀಗಾಗಿ ತೌಫಿಕ್ ಸೇರಿ ಒಟ್ಟು ಆರು ಜನ ಕೊಲೆ ಮಾಡಿದ್ದರು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು.

Comments

Leave a Reply

Your email address will not be published. Required fields are marked *