PSI ಹುದ್ದೆ ಕೊಡಿಸುವುದಾಗಿ 21 ಲಕ್ಷ ವಂಚನೆ – ಆರೋಪಿ ಅರೆಸ್ಟ್

ಚಿಕ್ಕಬಳ್ಳಾಪುರ: ಪಿಎಸ್‍ಐ ಹುದ್ದೆ ಕೊಡಿಸುವುದಾಗಿ ಲಕ್ಷ, ಲಕ್ಷ ವಸೂಲಿ ಮಾಡಿ ವಂಚನೆ ಮಾಡಿದ ಖತರ್ನಾಕ್ ಆರೋಪಿಯನ್ನು ಪೊಲೀಸರು  ಹೆಡೆಮುರಿ ಕಟ್ಟಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಶೋಕಿಲಾಲ ನವೀನ್ ಧಳಬಂಜನ್‍ನನ್ನು ಬಂಧಿಸಿದ್ದಾರೆ.

ರಾಜ್ಯದಲ್ಲಿ ಪಿಎಸ್‍ಐ ಹುದ್ದೆಗಳ ಅಕ್ರಮ ನೇಮಕಾತಿ ಪ್ರಕರಣ ಬಯಲಿಗೆ ಬಂದಿದ್ದು, ದಿನದಿಂದ ದಿನಕ್ಕೆ ಹೊಸ, ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳ ಸಮೇತ ಹಲವರ ಬಂಧನ ಆಗಿದ್ದು ತನಿಖೆ ಮುಂದುವೆರಿದಿದೆ. ಇದನ್ನೂ ಓದಿ: ಧ್ವನಿವರ್ಧಕ ನಿಯಮ ಉಲ್ಲಂಘನೆಯಾದ್ರೆ ಸಮಿತಿಯಲ್ಲಿರುವವರ ವಿರುದ್ಧ ಕ್ರಮ: ಆನಂದ್ ಸಿಂಗ್

ಈ ನಡುವೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದ ನಿವೃತ್ತ ಶಿಕ್ಷಕ ಸತ್ಯನಾರಾಯಣ ಅವರ ಮಗ ಕಿರಣ್ 2019ರಲ್ಲಿ 300 ಮಂದಿ ಪಿಎಸ್‍ಐಗಳ ನೇಮಕಾತಿ ವೇಳೆ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಆದರೆ ಈ ವೇಳೆ ಸತ್ಯನಾರಾಯಣ ಸ್ನೇಹಿತ ಜಯರಾಮರೆಡ್ಡಿ ಮೂಲಕ ಪರಿಚಯವಾದ ಹುಬ್ಬಳ್ಳಿ ಮೂಲದ ನವೀನ್ ಧಳಬಂಜನ್ ನಿಮ್ಮ ಮಗನಿಗೆ ನಾನು ಪಿಎಸ್‍ಐ ಹುದ್ದೆ ಕೊಡಿಸುತ್ತೇನೆ ಅಂತ ಹೇಳಿ ಹಂತ, ಹಂತವಾಗಿ ಸತ್ಯನಾರಾಯಣರೆಡ್ಡಿ ಬಳಿ 21 ಲಕ್ಷದ 20 ಸಾವಿರ ರೂಪಾಯಿ ಪಡೆದಿದ್ದಾನೆ.

ನಂತರ 21 ಲಕ್ಷ ಹಣ ಪಡೆದ ಆರೋಪಿ ನವೀನ್ ಧಳವಂಜನ್ ಕೆಲಸ ಕೊಡಿಸದ ಹಿನ್ನೆಲೆ ಸತ್ಯನಾರಾಯಣರೆಡ್ಡಿ ದುಡ್ಡು ವಾಪಸ್ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಈಗ ಕೊಡುತ್ತೇನೆ ಆಗ ಕೊಡುತ್ತೇನೆ ಅಂತ ಕಥೆ ಹೇಳಿ ಕಾಗೆ ಹಾರಿಸುತ್ತಿದ್ದ ನವೀನ್ ವಿರುದ್ಧ ಕೊನೆಗೆ ಬಾಗೇಪಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದರು. ದೂರಿನನ್ವಯ ಇದೀಗ ಪೊಲೀಸರು ನವೀನ್ ಧಳಬಂಜನ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಪಡೆದ ಹಣದಲ್ಲಿ ಶೋಕಿ ಮಾಡಿ ಖರ್ಚು ಮಾಡಿರುವುದಾಗಿ ಹೇಳಿದ್ದಾನೆ. ಸದ್ಯ ಆರೋಪಿಯನ್ನು ಸತ್ಯನಾರಾಯಣ ರೆಡ್ಡಿಗೆ ಮಾತ್ರ ಮೋಸ ಮಾಡಿದ್ದನಾ ಇಲ್ಲ ಬೇರೆ ಯಾರಿಗಾದರೂ ಮೋಸ ಮಾಡಿದ್ದಾನಾ ಅಂತ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಫ್ಲೋಟಿಂಗ್ ಬ್ರಿಡ್ಜ್ ಮುರಿಯಲು ತಾಂತ್ರಿಕ ಕಾರಣ ಇರಬೇಕು: ಆನಂದ್ ಸಿಂಗ್

Comments

Leave a Reply

Your email address will not be published. Required fields are marked *