ಫೈನಾನ್ಶಿಯರ್ ನನ್ನು ಬಂಧಿಸಿ ಇಬ್ಬರು ಮಕ್ಕಳು, ವಯೋವೃದ್ಧೆಯನ್ನು ಹೆದ್ದಾರಿಯಲ್ಲಿಯೇ ಬಿಟ್ಟ ಪೊಲೀಸರು!

ಬೆಂಗಳೂರು: ಫೈನಾನ್ಶಿಯರ್ ನನ್ನು ಬಂಧಿಸುವ ವೇಳೆ ಇಬ್ಬರು ಮಕ್ಕಳು ಹಾಗೂ ವಯೋವೃದ್ಧೆಯೊಬ್ಬರನ್ನು ಹೆದ್ದಾರಿಯಲ್ಲಿಯೇ ಪೊಲೀಸರು ಬಿಟ್ಟು ಹೋಗಿರುವ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಂಚೀಪುರ ಗೇಟ್‍ ನಲ್ಲಿರುವ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ರಾಜರಾಜೇಶ್ವರಿ ನಗರದ ಚಿಕ್ಕರಂಗೇಗೌಡನನ್ನು ಬಂಧಿಸುವ ವೇಳೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಅಮಾನವೀಯತೆ ಮೆರೆದಿದ್ದಾರೆ.

ಚಿಕ್ಕರಂಗೇಗೌಡ ಗ್ಲೋಬಲ್ ಫೈನಾನ್ಸ್ ಎನ್ನುವ ವೆಹಿಕಲ್ ಸೀಜಿಂಗ್ ಏಜೆನ್ಸಿ ನಡೆಸುತ್ತಿದ್ದು, ಎರಡು ದಿನದ ಹಿಂದೆ ಒಂದು ಬಸ್ಸನ್ನು ಸೀಝ್ ಪಡೆದಿದ್ದಾರೆ. ಈ ವೇಳೆ ಬಸ್ ಚಾಲಕನ ಅಜಾಗರೂಕತೆಯಿಂದ ಪ್ರಯಾಣಿಕರನ್ನು ಒಳಗೊಂಡಂತೆ ಬಸ್ಸನ್ನು ಗೋಡೌನ್‍ ಗೆ ತೆಗೆದುಕೊಂಡು ಹೋಗಲಾಗಿದೆ. ಈ ವೇಳೆ ಗಾಬರಿಗೊಂಡ ಪ್ರಯಾಣಿಕರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ:  ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳಿಂದ 42 ಪ್ರಯಾಣಿಕರಿದ್ದ ಬಸ್ ಹೈಜಾಕ್!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕರಂಗೇಗೌಡ ಎಂಬವರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಚಿಕ್ಕರಂಗೇಗೌಡ ಬೆಂಗಳೂರಿನಿಂದ ಕುಣಿಗಲ್ ಮಾರ್ಗವಾಗಿ ತುಮಕೂರಿಗೆ ಹೋಗುತ್ತಿದ್ದರು. ಆಗ ನೆಲಮಂಗಲ ಕುಣಿಗಲ್ ರಸ್ತೆಯ ಹಂಚೀಪುರ ಗೇಟ್ ಬಳಿ ತಮ್ಮ ಟಾಟಾ ಸುಮೋ ಕಾರಿಗೆ ಡೀಸೆಲ್ ತುಂಬಿಸಲು ಕಾರ್ ನಿಲ್ಲಿಸಿದ್ದಾರೆ. ಈ ವೇಳೆ ಚಿಕ್ಕರಂಗೇಗೌಡ ಅವರನ್ನು ಹಿಂಬಾಲಿಸುತ್ತಿದ್ದ ಪೊಲೀಸರು ಬಂಧಿಸಿದ್ದಾರೆ.

ಕಾರಿನಲ್ಲಿ ಚಿಕ್ಕರಂಗೇಗೌಡರ ಮಕ್ಕಳಾದ ಅಕ್ಷಯ, ದೀಪಕ್ ಹಾಗೂ ಅತ್ತೆ ಸರೋಜಮ್ಮ ಎಷ್ಟೇ ಮನವಿ ಮಾಡಿದ್ರೂ ಬಿಡದೆ, ಅವರೆಲ್ಲರನ್ನು ಹೆದ್ದಾರಿಯಲ್ಲೇ ಬಿಟ್ಟು ಹೋಗುವ ಮೂಲಕ ಮಾನವೀಯತೆ ಮರೆತ್ರು. ಬಸ್ ಸೀಝ್ ಮಾಡಿದ್ದನ್ನ ಹೈಜಾಕ್ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಿಕ್ಕರಂಗೇಗೌಡರನ್ನು ಬಂಧಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *