ಬಸ್ ಹತ್ತುವಾಗ ಪ್ರಯಾಣಿಕನ ಹಣ ಎಗರಿಸಿದ್ದ ಮೂವರು ಅಂದರ್

ಚಾಮರಾಜನಗರ: ಬಸ್ ಹತ್ತುವಾಗ ಪ್ರಯಾಣಿಕನೋರ್ವನ ಲಕ್ಷಾಂತರ ರೂ. ಹಣ ಎಗರಿಸಿದ್ದ ಮೂವರು ಖತರ್ನಾಕ್ ಕಳ್ಳರನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ರಾಜೀವ್ ನಗರದ ನಿವಾಸಿಗಳಾದ ಮೊಹಮ್ಮದ್ ಅರೀಫ್, ಅಸ್ಗರ್ ಪಾಷಾ, ನದೀಮ್ ಪಾಷಾ ಬಂಧಿತ ಆರೋಪಿಗಳು. ಪ್ರಯಾಣಿಕ ದಿಲೀಪ್ ಅವರ ಹಣವನ್ನು ಖದೀಮರು ಕದ್ದಿದ್ದರು. ಡಿ. 11ರಂದು ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಮೈಸೂರಿನ ಬಸ್ ಹತ್ತುವ ವೇಳೆ ದಿಲೀಪ್ ಅವರನ್ನು ಗುರಿಯಾಗಿಸಿಕೊಂಡು ಕಳ್ಳರು ತಳ್ಳಾಟ, ನೂಕಾಟ ಸೃಷ್ಟಿಸಿ ಬರೋಬ್ಬರಿ 2 ಲಕ್ಷ ರೂ. ಎಗರಿಸಿದ್ದರು. ಈ ಸಂಬಂಧ ದಿಲೀಪ್ ಗುಂಡ್ಲುಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕ್ರೈಂ ಪಿಎಸ್‍ಐ ಲಕ್ಷ್ಮೀನಾರಾಯಣ, ಸಿಬ್ಬಂದಿಯಾದ ಶಂಭು, ಮಹೇಶ್, ನಾಗೇಶ್ ತನಿಖೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸುವಂತೆ ಆದೇಶಿಸಿದ್ದಾರೆ. ಸದ್ಯ, ಪೊಲೀಸರು ಕದ್ದಿರುವ ಪೂರ್ಣ ಹಣವನ್ನು ದಿಲೀಪ್ ಅವರಿಗೆ ಹಿಂದಿರುಗಿಸಬೇಕಿದೆ.

Comments

Leave a Reply

Your email address will not be published. Required fields are marked *