ಚಿಕ್ಕಪ್ಪನಿಂದ ವಿಷದ ಕೇಕ್ ರವಾನೆ – ಹುಟ್ಟುಹಬ್ಬದ ದಿನದಂದೇ ಬಾಲಕ ಸಾವು

ಹೈದರಾಬಾದ್: ಹುಟ್ಟುಹಬ್ಬಕ್ಕೆ ಕೇಕ್ ಕಳುಹಿಸಿ ಎಂದು ಕೇಳಿದ 9 ವರ್ಷದ ಬಾಲಕನಿಗೆ ಆತನ ಚಿಕ್ಕಪ್ಪ ವಿಷದ ಕೇಕ್ ಕಳುಹಿಸಿರುವ ಘಟನೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಆಯಿನಾಪುರ ಗ್ರಾಮದಲ್ಲಿ ನಡೆದಿದೆ.

ಕೋಮಾರವೆಲ್ಲಿ ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದು, ಹುಟ್ಟುಹಬ್ಬದ ಸಂದರ್ಭದಲ್ಲಿ ವಿಷಪೂರಿತ ಕೇಕ್ ಸೇವಿಸಿ ಅಸ್ವಸ್ಥರಾಗಿದ್ದ ಒಂದೇ ಕುಟುಂಬದ ನಾಲ್ವರ ಪೈಕಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ರಾಮ್ ಚರಣ್(9) ಹಾಗೂ ರವಿ(39) ಮೃತಪಟ್ಟಿದ್ದು, ಕುಟುಂಬದ ಇನ್ನಿಬ್ಬರು ಸದಸ್ಯರಾದ ಭಾಗ್ಯ ಮತ್ತು ಪೂಜಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಟುಂಬದ ಸದಸ್ಯರನ್ನು ಸಿದ್ದಿಪೇಟೆಯ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ರಾಮ್ ಚರಣ್(9) ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೇಳೆ ರವಿ(39) ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

9 ವರ್ಷದ ಬಾಲಕ ರಾಮ್ ಚರಣ್ ಹುಟ್ಟುಹಬ್ಬ ಆಚರಣೆ ವೇಳೆ ಈ ಘಟನೆ ಸಂಭವಿಸಿದೆ. ತನ್ನ ಹುಟ್ಟುಹಬ್ಬಕ್ಕೆ ಕೇಕ್ ತರುವಂತೆ ತನ್ನ ಚಿಕ್ಕಪ್ಪ ಶ್ರೀನಿವಾಸ್‍ಗೆ ತಿಳಿಸಿದ್ದಾನೆ. ಆದರೆ ಶ್ರೀನಿವಾಸ್ ಅವರಿಗೆ ವಿಷದ ಕೇಕ್ ಕಳುಹಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಕೇಕ್ ಸೇವಿಸಿದ ನಂತರ ಕುಟುಂಬದ ಎಲ್ಲ ಸದಸ್ಯರು ಅಸ್ವಸ್ಥರಾಗಿದ್ದಾರೆ ಎಂದು ದೂರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀನಿವಾಸ್ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *