15 ವರ್ಷದ ಬಾಲಕಿ ವಿವಾಹವಾಗಿ ಸಿಕ್ಕಿಬಿದ್ದ ಗ್ರಾಮ ‌ಪಂಚಾಯಿತಿ ಅಧ್ಯಕ್ಷ

– ಅಧ್ಯಕ್ಷನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

ಚಿಕ್ಕೋಡಿ: ಗ್ರಾಮ ಪಂಚಾಯಿತಿ ಅಧ್ಯಕ್ಷನೊಬ್ಬ 15 ವರ್ಷದ ಬಾಲಕಿಯನ್ನು ವಿವಾಹವಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಸಚಿವ ಸತೀಶ್‌ ಜಾರಕಿಹೊಳಿ‌ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಸ್ಸಾಪುರ ಗ್ರಾಮ ಇದು.

ಬಸ್ಸಾಪುರ ಗ್ರಾಪಂ ಅಧ್ಯಕ್ಷ ‌ಭೀಮಶಿ ಕಾಲಿಮಣಿ ಎಂಬಾತನಿಂದ ಈ ಕೃತ್ಯ ನಡೆದಿದೆ. ಬಾಲ್ಯ ವಿವಾಹ ಮಾಡಿಕೊಂಡ ಗ್ರಾಪಂ ಅಧ್ಯಕ್ಷ ಭೀಮಶಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹುಕ್ಕೇರಿ ತಾಲೂಕಿನ ಯಮಕನಮರಡಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. 2023ರ ನ.5 ರಂದು ಅಪ್ರಾಪ್ತೆ ಜೊತೆಗೆ ಭೀಮಶಿ ಕಾಲಿಮಣಿ ವಿವಾಹವಾಗಿದ್ದ.

ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಗ್ರಾಪಂ ಅಧ್ಯಕ್ಷ ಭೀಮಶಿ ಕಳ್ಳಾಟ ನಡೆಸುತ್ತಿದ್ದಾನೆ‌. ದೂರು ಬಂದ ತಕ್ಷಣವೇ ಬಸ್ಸಾಪುರ ಗ್ರಾಮಕ್ಕೆ ನಾಲ್ಕು ಸಲ ಮಕ್ಕಳ ರಕ್ಷಣಾ ತಂಡ ಹೋಗಿದೆ. ಜಿಲ್ಲಾ ‌ಮಕ್ಕಳ ರಕ್ಷಣಾಧಿಕಾರಿ ಡಾ. ಪ್ರವೀಣ ನೇತೃತ್ವದ ತಂಡ ನಾಲ್ಕು ಸಲ ಬಸ್ಸಾಪುರಕ್ಕೆ ಭೇಟಿ ನೀಡಿದೆ. ಆದರೂ, ಬಾಲಕಿ ಪತ್ತೆಹಚ್ಚಲು ಮಕ್ಕಳ ರಕ್ಷಣಾ ‌ತಂಡ ವಿಫಲವಾಗಿದೆ. ಈ ಮಧ್ಯೆಯೇ ಆಕೆ ಪ್ರಾಪ್ತ ವಯಸ್ಸಿನವಳು ಎಂಬ ದಾಖಲೆಯನ್ನು ಅಧ್ಯಕ್ಷ ಬಿಡುಗಡೆ ಮಾಡಿದ್ದ.

ಅಧ್ಯಕ್ಷ ಬಂಧನದ ಭೀತಿಯಿಂದ ‌ಪತ್ನಿಯ ನಕಲಿ ಜನನ ಪ್ರಮಾಣ ಪತ್ರ ವೈರಲ್ ಮಾಡಿದ್ದ ಎನ್ನಲಾಗಿದೆ. ಶಾಲಾ‌ ಟ್ರಾನ್ಸ್‌ಫರ್ ಸರ್ಟಿಫಿಕೇಟ್ ಜೊತೆಗೆ ಹೊಸ ಜನನ ಪ್ರಮಾಣದ ‌ದಾಖಲೆ‌ ಹೋಲಿಕೆ ಮಾಡಿದ ಅಧಿಕಾರಿಗಳು‌, ಗ್ರಾಪಂ ಅಧ್ಯಕ್ಷ ‌ಭೀಮಶಿ ಕಾಲಿಮಣಿ ಬಾಲ್ಯ ವಿವಾಹ ಆಗಿರುವುದು ದೃಢವಾಗಿದೆ. ಕೃತ್ಯ‌ ಎಸಗಿರುವುದು ದೃಢವಾದ ಹಿನ್ನೆಲೆಯಲ್ಲಿ ಗ್ರಾಪಂ ‌ಅಧ್ಯಕ್ಷನ‌ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿದೆ.