ಕೊರೊನಾ ವಿರುದ್ಧದ ಹೋರಾಟಕ್ಕೆ 25 ಸಾವಿರ ರೂ. ದೇಣಿಗೆ ನೀಡಿದ ಪ್ರಧಾನಿ ಮೋದಿ ತಾಯಿ

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರು ತಮ್ಮ ಉಳಿತಾಯದಿಂದ 25 ಸಾವಿರ ರೂ.ವನ್ನು ಮಂಗಳವಾರ ಪಿಎಂ-ಕೇರ್ಸ್ ನಿಧಿಗೆ ಹಾಕಿದ್ದಾರೆ.

ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಕೂಡ ಇಂದು ಪಿಎಂ-ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ. ಆದರೆ ಎಷ್ಟು ಹಣವನ್ನು ನೀಡಿದ್ದಾರೆ ಎಂದು ಯಾವುದೇ ಮಾಹಿತಿ ನೀಡಿಲ್ಲ.

ಕೋವಿಡ್-19 ಭೀತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಶನಿವಾರ ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಯನ್ನು ರಚಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು, ಕೇರ್ಸ್ ಗೆ ಉದಾರವಾಗಿ ದೇಣಿಗೆ ನೀಡಬೇಕೆಂದು ಜನತೆಗೆ ಮನವಿ ಮಾಡಿಕೊಂಡಿದ್ದರು.

ಪ್ರಧಾನಿ ಮೋದಿ ಅವರ ಮನವಿಯ ನಂತರ, ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾಪಟುಗಳು, ಕ್ರಿಕೆಟ್ ಆಟಗಾರರು, ಉದ್ಯಮಿಗಳು ಸೇರಿದಂತೆ ಹಲವಾರು ಗಣ್ಯರು ಪಿಎಂ-ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ. ಟಾಟಾ ಸನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದಾನಿ ಗ್ರೂಪ್‍ನಂತಹ ಕಾರ್ಪೊರೇಟ್‍  ಸಂಸ್ಥೆಗಳು ಸಹ ತುರ್ತು ನಿಧಿಗೆ ತಮ್ಮ ಪಾಲನ್ನು ನೀಡಿವೆ.

ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ದಂಪತಿ, ಅಜಿಂಕ್ಯಾ ರಹಾನೆ, ಸುರೇಶ್ ರೈನಾ ಸೇರಿದಂತೆ ಟೀಂ ಇಂಡಿಯಾದ ಅನೇಕ ಆಟಗಾರರು ಕೊರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿದ್ದಾರೆ.

ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಪ್ರಧಾನಿ ಮೋದಿ ಮಾರ್ಚ್ 24ರಂದು ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಿದರು. ಆದರೆ ಕೊರೊನಾ ಸೋಂಕಿತರ ಸಂಖ್ಯೆ ಮಂಗಳವಾರ ಸಂಜೆಯ ವೇಳೆಗೆ 1,400ಕ್ಕೆ ಏರಿದೆ. ಮಾರಣಾಂತಿಕ ವೈರಸ್‍ನಿಂದಾಗಿ 41 ಜನರು ಮೃತಪಟ್ಟಿದ್ದಾರೆ.

Comments

Leave a Reply

Your email address will not be published. Required fields are marked *