ಸುಷ್ಮಾ ಸ್ವರಾಜ್ ಅಗಲಿಕೆ – ಕಣ್ಣೀರಿಟ್ಟ ಪ್ರಧಾನಿ ಮೋದಿ

ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಇಡೀ ದೇಶವೇ ಸಂತಾಪ ಸೂಚಿಸಿದೆ. ಇತ್ತ ಸುಷ್ಮಾ ಸ್ವರಾಜ್ ಅವರ ಭೌತಿಕ ಕಾಯದ ದರ್ಶನ ಪಡೆದ ಪ್ರಧಾನಿ ಮೋದಿ ಕಣ್ಣೀರಿಟ್ಟಿದ್ದಾರೆ.

ಸುಷ್ಮಾ ಸ್ವರಾಜ್ ನಿವಾಸಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ್ದ ಮೋದಿ ಅವರು ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಆತ್ಮೀಯ ವ್ಯಕ್ತಿಯನ್ನ ನೆನೆದು ಭಾವುಕರಾಗಿ ದುಃಖವನ್ನು ತಡೆಯಲು ಯತ್ನಿಸಿದಂತೆ ಕಂಡರು ಕಣ್ಣೀರನ್ನು ತಡೆಯಲಾಗದೆ ಭಾವುಕರಾದರು. ಆ ಬಳಿಕ ಸುಷ್ಮಾ ಕುಟುಂಬಸ್ಥರನ್ನು ಭೇಟಿ ಮಾಡಿ ಸಂತ್ವಾನ ಹೇಳಿದರು. ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್‍ನಾಥ್ ಸಿಂಗ್, ಸೋನಿಯಾ ಗಾಂಧಿ, ಒಡಿಶಾ ಸಿಎಂ, ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಸುಷ್ಮಾ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ ಅವರು, ಭಾರತದ ರಾಜಕೀಯದ ವೈಭವಯುತ ಅಧ್ಯಾಯವೊಂದು ಅಂತ್ಯವಾಗಿದೆ. ತಮ್ಮ ಬದುಕನ್ನು ಸಾರ್ವಜನಿಕ ಜೀವನಕ್ಕಾಗಿಯೇ ಮುಡಿಪಾಗಿಟ್ಟ, ಬಡವರ ಸೇವೆ ಮಾಡಿ ನಿಷ್ಠಾವಂತ ನಾಯಕಿ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ದೇಶವೇ ಕಣ್ಣೀರಿಡುತ್ತಿದೆ. ಸುಷ್ಮಾ ಅವರದ್ದು ಕೋಟಿ ಜನರಿಗೆ ಸ್ಫೂರ್ತಿ ನೀಡುವ ವ್ಯಕ್ತಿತ್ವ ಎಂದು ಬರೆದುಕೊಂಡಿದ್ದರು.

ಅಪ್ರತಿಮ ಸಂಸದೀಯ ಪಟುವಾಗಿದ್ದ ಸುಷ್ಮಾ ಅವರು, ಸರ್ಕಾರದ ಸಚಿವರಾಗಿ ಭಾರತದ ಸಂಬಂಧಗಳನ್ನು ಇತರೇ ದೇಶಗಳೊಂದಿಗೆ ಉತ್ತಮವಾಗಿಸಲು ಕಾರ್ಯನಿರ್ವಹಿಸಿದ್ದರು. ಅವರ ಅಗಲಿಕೆಯಿಂದ ನನಗೆ ವೈಯಕ್ತಿಕ ನಷ್ಟವಾಗಿದೆ. ಅವರೊಂದಿಗೆ ಕಾರ್ಯನಿರ್ವಹಿಸಿದ್ದ 5 ವರ್ಷದ ಅವಧಿ ಸ್ಮರಣೀಯವಾಗಿದ್ದು, ಅವರು ಅನಾರೋಗ್ಯದಿಂದಿದ್ದರೂ ಕೂಡ, ತಮ್ಮ ಕಾರ್ಯವನ್ನು ದೇಶಕ್ಕಾಗಿ ಮಾಡುತ್ತಿದ್ದರು ಎಂದು ಪ್ರಧಾನಿ ಮೋದಿ ಅವರು ಸರಣಿ ಟ್ವೀಟ್ ಮಾಡಿದ್ದರು.

Comments

Leave a Reply

Your email address will not be published. Required fields are marked *