ನಾರಾಯಣ ಗುರು, ಬಸವಣ್ಣನ ವಚನ ಜಪಿಸಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಉಡುಪಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ರಾಜ್ಯದ ಮೂರನೇ ಜನಾಶೀರ್ವಾದ ಯಾತ್ರೆಯಲ್ಲಿ ನಾರಾಯಣ ಗುರುಗಳು ಮತ್ತು ಬಸವಣ್ಣನ ಜಪ ಮಾಡಿದ್ದಾರೆ. ಇಬ್ಬರ ಜೀವನವನ್ನು ಉದಾಹರಣೆಯಾಗಿ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕರಾವಳಿ ನಾರಾಯಣ ಗುರುಗಳ ಕರ್ಮಭೂಮಿ. ನಾವೆಲ್ಲರೂ ಒಂದೇ ಎಂಬುವುದು ಗುರುಗಳ ಮಂತ್ರ. ನಾರಾಯಣ ಗುರುಗಳ ತತ್ವ ಆದರ್ಶವನ್ನು ಕಾಂಗ್ರೆಸ್ ಮಾತ್ರ ಪಾಲಿಸುತ್ತಿದೆ. ಬಿಜೆಪಿ ಜಾತಿ, ಧರ್ಮಗಳ ನಡುವೆ ಕೋಮು ಭಾವನೆ ಸೃಷ್ಟಿಸುತ್ತದೆ, ಬಿಜೆಪಿಗೆ ಜನರ ನೆಮ್ಮದಿ ಬೇಡ ಎಂದರು. ಅಲ್ಲದೇ ಬಸವಣ್ಣ ನವರ ವಚನವನ್ನು ಮತ್ತೊಮ್ಮೆ ತಮ್ಮ ಭಾಷಣದ ಉದ್ದಕ್ಕೂ ಉಲ್ಲೇಖಿಸಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಉಡುಪಿ ನಾಲ್ಕು ಬ್ಯಾಂಕ್ ಗಳ ಜನಕ. ಕಾಂಗ್ರೆಸ್ ಸರ್ಕಾರ ದೇಶಾದ್ಯಾಂತ ಬ್ಯಾಂಕ್‍ಗಳನ್ನು ವಿಸ್ತರಿಸಿತು. ಆದರೆ ಇಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬ್ಯಾಂಕ್ ವ್ಯವಸ್ಥೆ ಯನ್ನು ಕುಲಗೆಡಿಸಿದೆ. ಬಂಡವಾಳ ಶಾಹಿಗಳ 2.50 ಲಕ್ಷ ಕೋಟಿ ರೂ. ಹಣ ಮನ್ನಾ ಮಾಡಿದ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡುವ ಮನಸ್ಸು ಇಲ್ಲ. ಮೋದಿ ಬಸವಣ್ಣನವರನ್ನು ಹೊಗಳುತ್ತಾರೆ. ಆದರೆ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು, ಈಗ 10 ರೂ. ಹಾಕಿ ನುಡಿದಂತೆ ನಡೆಯಿರಿ ಎಂದು ಕಿಡಿಕಾರಿದರು.

ದೇಶದ ಅಭಿವೃದ್ಧಿಗೆ 70 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಗೆ ಅವಮಾನ ಮಾಡಿದರೆ ಅದು ದೇಶಕ್ಕೆ ಮಾಡುವ ಅವಮಾನ. ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಿ. ಬಿಜೆಪಿಯ ಈ ಹೇಳಿಕೆ ಹಿರಿಯರಿಗೆ ಮಾಡಿದ ಅವಮಾನ. ಮೋದಿ ಅವರು ದೇಶದ ಹಿರಿಯರಿಗೆ ಗೌರವ ಕೊಡುವವರಲ್ಲ. ಕಾಂಗ್ರೆಸ್ 70 ವರ್ಷದಿಂದ ಏನೂ ಮಾಡಿಲ್ಲ ಎನ್ನುವ ಮೋದಿ ಅವರು ದೇಶ ವಿದೇಶದಲ್ಲಿ ಓಡಾಡುತ್ತಾರೆ. 70 ವರ್ಷದಲ್ಲಿ ಜನ ದೇಶದಲ್ಲಿ ಬದುಕಲೇ ಇಲ್ಲವೇ ಎಂದು ಪ್ರಶ್ನಿಸಿದರು. ಅಲ್ಲದೇ ದೇಶದ ಪ್ರಗತಿ ಒಬ್ಬರಿಂದ ಅಸಾಧ್ಯ, ಎಲ್ಲವೂ ಜೊತೆಯಾಗಿ ಸಾಗಿದರೆ ಮಾತ್ರ ದೇಶಾಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ಮೋದಿಗೆ ಕುಟುಕಿದರು.

Comments

Leave a Reply

Your email address will not be published. Required fields are marked *