ಸೈನಿಕರ ಬಗ್ಗೆ ಲಘುವಾಗಿ ಮಾತನಾಡಿದವರು ಮುಳುಗಿ, ಮುಳುಗಿ ಸಾಯ್ತಾರೆ – ಎಚ್‍ಡಿಕೆಗೆ ಮೋದಿ ತಿರುಗೇಟು

– ಟಿಪ್ಪು ಸುಲ್ತಾನ ಜಯಂತಿ ಆಚರಣೆಗೆ ಹಣವಿದೆ, ಹಂಪಿ ಉತ್ಸವಕ್ಕಿಲ್ಲ

ಕೊಪ್ಪಳ: ಸೈನಿಕರ ಬಗ್ಗೆ ಲಘುವಾಗಿ ಮಾತನಾಡುವವರನ್ನು ಕ್ಷಮಿಸಲು ಸಾಧ್ಯವಿಲ್ಲ. ಸೇನೆಯ ಬಗ್ಗೆ ಹಗುರವಾಗಿ ಮಾತನಾಡಿದವರು ಮುಳುಗಿ, ಮುಳುಗಿ ಸಾಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗಂಗಾವತಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಸೈನಿಕರು ಎರಡು ಹೊತ್ತಿನ ಊಟಕ್ಕಾಗಿ ದೇಶ ಕಾಯಲು ಹೋಗುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇದನ್ನು ನಾನು ನಿನ್ನೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ದೇಶದ ಸೇನೆಯ ವಿಚಾರದಲ್ಲಿ ಇಷ್ಟೊಂದು ಅಪಮಾನ ಮಾಡಬಾರದು. ಎರಡು ಹೊತ್ತು ಊಟ ಇಲ್ಲದವರು ಸೇನೆ ಸೇರಿದ್ದಾರೆ ಎನ್ನುವುದು ಸೈನಿಕರಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದರು. ಇದನ್ನು ಓದಿ: ದೇವೇಗೌಡ್ರು ರಾಜಕೀಯ ಸನ್ಯಾಸ ಸ್ವೀಕರಿಸಿಲ್ಲ, ಈಗ ಮಗ ಸ್ವೀಕರಿಸುತ್ತಾರಾ: ರೇವಣ್ಣಗೆ ಮೋದಿ ಟಾಂಗ್

ಮೈತ್ರಿ ನಾಯಕರಿಗೆ ದೇಶದ ಮಹತ್ವ ಗೊತ್ತಿಲ್ಲ. ರಕ್ಷಣೆಯ ವಿಚಾರದಲ್ಲಿ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರು ವೀರ ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಲಿಲ್ಲ ಎಂದು ಆರೋಪಿಸಿದರು.

ಟಿಪ್ಪು ಸುಲ್ತಾನ ಜಯಂತಿ ಆಚರಣೆಗೆ ನಿಮ್ಮ ಬಳಿ ಹಣವಿದೆ. ಆದರೆ ಹಂಪಿ ಉತ್ಸವ ಮಾಡಲು ಹಣವಿಲ್ಲ. ನಿಮ್ಮ ಯೋಚನೆಗಳಿಗೆ ನನ್ನದೊಂದು ಧಿಕ್ಕಾರ ಹೇಳಿ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.

ಭತ್ತದ ನಾಡು ಗಂಗಾವತಿ ಭಾಗದ ರೈತರಿಗೆ ನೀರಿನ ಸಮಸ್ಯೆ ಇದೆ. ನಿಮ್ಮ ಚೌಕಿದಾರ ಆರಂಭಿಸಿದ ಕಿಸಾನ್ ಯೋಜನೆಗೆ ರೈತರ ಲಿಸ್ಟ್ ಕಳುಹಿಸಲು ಕಾಂಗ್ರೆಸ್-ಜೆಡಿಎಸ್ ಹಿಂದೆ ಮುಂದೆ ನೋಡಿತು. ಆದರೆ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲಾ ರೈತರ ಖಾಗೆ ಹಣ ಹಾಕಲಾಗುವುದು. 4 ಎಕರೆಗೂ ಹೆಚ್ಚು ಭೂಮಿ ಹೊಂದಿರುವ ರೈತರಿಗೆ ಕಿಸಾನ್ ಯೋಜನೆ ಲಾಭ ಸಿಗಲಿದೆ. ಮುಂದಿನ 5 ವರ್ಷಗಳಲ್ಲಿ ನೀರು ಉಳಿಸಲು, ನದಿ ಜೋಡಣೆ ಬಗ್ಗೆ ಗಮನಹರಿಸೋಣ. ತುಂಗಭದ್ರಾ ಜಲಾಶಯ ಅಭಿವೃದ್ಧಿಗೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

Comments

Leave a Reply

Your email address will not be published. Required fields are marked *