ನನ್ನ ಸಾವಿಗೆ ಎಎಸ್‍ಐ ಕಾರಣ – ಡೆತ್‍ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

– ಠಾಣೆಯ ಮುಂದೆ ಶವವಿಟ್ಟು ಕುಟುಂಬಸ್ಥರಿಂದ ನ್ಯಾಯಕ್ಕಾಗಿ ಪ್ರತಿಭಟನೆ

ಚಿಕ್ಕೋಡಿ: ಜಮೀನು ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ವಿಷ ಸೇವಿಸಿ ಸಾವನ್ನಪ್ಪಿದ್ದು, ಆತನ ಸಾವಿಗೆ ನ್ಯಾಯಸಿಗಬೇಕು ಎಂದು ಆಗ್ರಹಿಸಿ ಕುಟುಂಬಸ್ಥರು ರಾಯಭಾಗ ಪೊಲೀಸ್ ಠಾಣೆ ಎದುರು ಹೆಣವನ್ನು ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ರಾಯಭಾಗ ಹೊರವಲಯದ ಆನೆಬಾಯಿಖೋಡಿ ನಿವಾಸಿ ಸದಾಶಿವ ಶನಿವಾರ ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದಾಶಿವ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿ ಸಂಬಂಧಿಕರು ಪ್ರತಿಭಟನೆಗೆ ಇಳಿದಿದ್ದಾರೆ.

ಸದಾಶಿವ ಮತ್ತು ಅವರ ಸಹೋದರರ ಮಧ್ಯೆ ಜಮೀನು ವಿಚಾರವಾಗಿ ಆಗಾಗ ಕಲಹವಾಗುತಿತ್ತು. ಈ ಹಿನ್ನೆಲೆಯಲ್ಲಿ ಮೃತ ಸದಾಶಿವ ತನ್ನ ಸಹೋದರರ ಮೇಲೆ ರಾಯಭಾಗ ಪೊಲೀಸರಿಗೆ ದೂರು ನೀಡಲು ಹೋದರೂ ಸಹ ಪೊಲೀಸರು ದೂರು ದಾಖಲಿಸಿಕೊಳ್ಳದೇ ಸದಾಶಿವನನ್ನೆ ಗದರಿಸಿ ಕಳಿಸುತ್ತಿದ್ದರು ಎಂದು ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಯಾದಿಗಳ ಕಲಹ ಮತ್ತು ಪೊಲೀಸರು ದೂರು ಸ್ವೀಕರಿಸಿದ್ದಕ್ಕೆ ಮನನೊಂದು ಸದಾಶಿವ ತನ್ನ ಸಾವಿಗೆ ರಾಯಭಾಗ ಎಎಸ್‍ಐ ಸರಿಕರ್ ಕಾರಣ ಅಂತ ಹೇಳಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಆತ್ಮಹತ್ಯೆಗೆ ಪೊಲೀಸರೇ ಕಾರಣ. ಹೀಗಾಗಿ ಹೆಣವನ್ನು ಮುಂದಿಟ್ಟುಕೊಂಡು ನ್ಯಾಯಕ್ಕಾಗಿ ಪ್ರತಿಭಟನೆ ಮಾಡಿದ್ದೇವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *