50 ಲಕ್ಷ ರೂ. ಮೌಲ್ಯದ ಕಾಳಿಂಗ ಸರ್ಪದ ವಿಷ ಸಾಗಾಟ- ಮೈಸೂರಿನಲ್ಲಿ ಓರ್ವನ ಬಂಧನ

ಮೈಸೂರು: ಕಾಳಿಂಗ ಸರ್ಪದ ವಿಷ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದು ಮೈಸೂರಿನಲ್ಲಿ ಪತ್ತೆಯಾಗಿದೆ.

ಸುಮಾರು 50 ಲಕ್ಷ ರೂ. ಮೌಲ್ಯದ ಕಾಳಿಂಗ ಸರ್ಪದ ವಿಷವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಆತನಿಂದ ಒಂದು ಲೀಟರ್ ಕಾಳಿಂಗ ಸರ್ಪದ ವಿಷದ ಬಾಟಲಿಯನ್ನು ಅರಣ್ಯ ಸಂಚಾರಿ ದಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೆ.ವಿ.ರಾಜು (43) ಬಂಧಿತ ಆರೋಪಿ. ಕೊಡಗು ಜಿಲ್ಲೆಸೋಮವಾರಪೇಟೆಯ ರಾಜುನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೆಲವೊಂದು ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಈ ಹಾವಿನ ವಿಷವನ್ನು ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಮಾರಾಟ ಮಾಡುತ್ತಿದ್ದುದಾಗಿ ಆರೋಪಿ ಹೇಳಿದ್ದಾನೆ. ಸೋಮವಾರಪೇಟೆ ಸುತ್ತಮುತ್ತ ಹಾವಾಡಿಗರಿಂದ ಕಾಳಿಂಗ ಸರ್ಪದ ವಿಷ ಸಂಗ್ರಹಿಸಿ ಮಾರಾಟ ಮಾಡಲು ಬಾಟಲಿಯಲ್ಲಿ ಶೇಖರಿಸಿಕೊಂಡಿದ್ದ ಎನ್ನಲಾಗಿದೆ.

ಈತ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಎದುರು ಕಾಳಿಂಗ ಸರ್ಪದ ವಿಷವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ವಿಷಯ ತಿಳಿದ ಪೊಲೀಸರು, ಹಠಾತ್ ದಾಳಿ ನಡೆಸಿ ರಾಜುನನ್ನು ಬಂಧಿಸಿದ್ದಾರೆ. ಅರಣ್ಯ ಸಂಚಾರಿ ದಳದ ಉಪ ನಿರೀಕ್ಷಕ ಎಸ್.ಪಿ ಹರೀಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

Comments

Leave a Reply

Your email address will not be published. Required fields are marked *