ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸ್ತೀನೆಂದು 5 ಕೋಟಿ ರೂ. ಗುಳುಂ ಮಾಡಿದ್ದ ವಂಚಕ ಅರೆಸ್ಟ್

ಮೈಸೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಿರುದ್ಯೋಗಿಗಳನ್ನು ನಂಬಿಸಿ ವಂಚಿಸುತ್ತಿದ್ದ ಖದೀಮ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ರಾಜ್ಯಾದ್ಯಂತ ನೂರಾರು ಮಂದಿ ಯುವಕರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ರೈಲ್ವೆ ಇಲಾಖೆಯ ಮಾಜಿ ಉದ್ಯೋಗಿ ಪಿ. ವಿಲ್ಸನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ರಾಜ್ಯಾದ್ಯಂತ ನೂರಾರು ಮಂದಿ ಯುವಕರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಎನ್ನಲಾಗಿದೆ.

ರಾಜ್ಯದಲ್ಲಿ ವಂಚನೆ ನಡೆಸಿ ತಮಿಳುನಾಡಿನಲ್ಲಿ ಅಡಗಿ ಕುಳಿತಿದ್ದ ವಂಚಕನನ್ನು ರಾಜ್ಯ ಪೊಲೀಸರು ಬಂಧಿಸಿದ್ದಾರೆ. ಬಾಡಿ ವಾರೆಂಟ್ ಮೇರೆಗೆ ದಾವಣಗೆರೆ ಪೊಲೀಸರು ಮೈಸೂರಿನ ಲಕ್ಷ್ಮೀಪುರಂ ಠಾಣೆ ಪೊಲೀಸರಿಗೆ ವಂಚಕನನ್ನು ಒಪ್ಪಿಸಿದ್ದಾರೆ. ಬೆಂಗಳೂರು ರೈಲ್ವೆ ಡಿವಿಷನ್ ನಲ್ಲಿ ಕಚೇರಿ ಸೂಪರಿಂಟೆಂಡೆಂಟ್ ಆಗಿದ್ದ ವಿಲ್ಸನ್, ಜನರಲ್ ಮ್ಯಾನೇಜರ್ ಕೋಟಾದಲ್ಲಿ ನೇರ ನೇಮಕಾತಿ ಮಾಡಿಸುತ್ತೇನೆಂದು ನಂಬಿಸಿ ನಿರುದ್ಯೋಗಿಗಳಿಂದ ಸುಮಾರು ಐದು ಕೋಟಿ ರೂಪಾಯಿ ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ.

ರಾಜ್ಯಾದ್ಯಂತ 25ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ರೈಲ್ವೆ ಅಧಿಕಾರಿಗಳ ನಕಲಿ ಸಹಿ, ಸೀಲು ಬಳಸಿ ನೇಮಕಾತಿ ಆದೇಶ ಪ್ರತಿಗಳನ್ನು ಈ ಖತರ್ನಾಕ್ ವಂಚಕ ನೀಡಿದ್ದ ಎಂದು ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *