ಅಣ್ಣ-ಅತ್ತಿಗೆಗೆ ಶೂಟ್ ಮಾಡಿ ಕೊಂದು ತಾನೂ ಗುಂಡು ಹಾರಿಸಿಕೊಂಡ!

ಮಡಿಕೇರಿ: ವ್ಯಕ್ತಿಯೊಬ್ಬ ಅಣ್ಣ, ಅತ್ತಿಗೆಯನ್ನು ಗುಂಡು ಹೊಡೆದು ಕೊಲೆ ಮಾಡಿ ತಾನೂ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿರುವ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದ ಸಮೀಪದ ಕಿಗ್ಗಾಲು ಗ್ರಾಮದಲ್ಲಿ ನಡೆದಿದೆ.

ತಮ್ಮಯ್ಯ ಹಾರಿಸಿದ ಗುಂಡೇಟಿಗೆ ಅಣ್ಣ ದೇವಯ್ಯ(54) ಹಾಗೂ ಅತ್ತಿಗೆ ಪ್ರೇಮ(48) ಸಾವನ್ನಪ್ಪಿದ್ದಾರೆ. ಇಬ್ಬರು ಮೃತಪಟ್ಟ ನಂತರ ತಮ್ಮಯ್ಯ ತಾನೂ ಕೂಡ ಗುಂಡು ಹಾರಿಸಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಅನೇಕ ದಿನಗಳಿಂದ ಆಸ್ತಿ ಹಾಗೂ ತೋಟದ ವಿಷಯದಲ್ಲಿ ಅಣ್ಣ ಹಾಗೂ ತಮ್ಮನ ನಡುವೆ ಗಲಾಟೆಯಾಗುತ್ತಿತ್ತು. ಅಷ್ಟೇ ಅಲ್ಲದೇ ಆಸ್ತಿ ವಿಚಾರವಾಗಿ ಅಣ್ಣ ಕೋರ್ಟ್ ಮೇಟ್ಟಿಲೇರಿದ್ದು, ಕೋರ್ಟ್ ನಲ್ಲಿ ಅಣ್ಣ ದೇವಯ್ಯನ ಪರ ತೀರ್ಪು ಬಂದಿತ್ತು. ಕೋರ್ಟ್ ತೀರ್ಪನ್ನು ಖಂಡಿಸಿ ಇಂದು ಬೆಳಿಗ್ಗೆ ತಮ್ಮಯ್ಯ ಮನೆಗೆ ಬಂದು ಏಕಾಏಕಿ ಅಣ್ಣ ಹಾಗೂ ಅತ್ತಿಗೆಗೆ ಗುಂಡು ಹಾರಿಸಿ ಕೊಂದಿದ್ದಾನೆ. ನಂತರ ತಾನೂ ಗುಂಡು ಹಾರಿಸಿಕೊಂಡಿದ್ದಾನೆ ಎನ್ನಲಾಗಿದೆ.

ಗುಂಡು ಹಾರಿಸಿಕೊಂಡು ನರಳುತ್ತಿದ್ದ ತಮ್ಮಯ್ಯನನ್ನು ಗ್ರಾಮಸ್ಥರು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಕೂಡ ಮೃತ ಪಟ್ಟಿದ್ದಾನೆ. ಆಸ್ತಿ ವೈಷಮ್ಯವೇ ಘಟನೆಗೆ ಕಾರಣವೆಂದು ಹೇಳಲಾಗುತ್ತಿದೆ.

ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *