ಅಪಘಾತದಲ್ಲಿ ರೈತ ಸಾವು ಎಂದು ದಾಖಲಾಗಿದ್ದ ಕೇಸ್‍ಗೆ ಟ್ವಿಸ್ಟ್- ಕೊಲೆ ಎಂದು ಗೊತ್ತಾಗಿದ್ದು ಹೀಗೆ

ರಾಯಚೂರು: ಆಕ್ಸಿಡೆಂಟ್ ಕೇಸೊಂದು ಪೊಲೀಸರ ಸಮಯೋಚಿತ ತನಿಖೆಯಿಂದಾಗಿ ಮರ್ಡರ್ ಎಂದು ಸಾಬೀತಾಗಿದೆ. ನೀರಿನ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ತನ್ನ ಜಮೀನಿಗೆ ನೀರು ಬಿಡುತ್ತಿಲ್ಲ ಅಂತ ಜಗಳ ತೆಗೆದು ರೈತನನ್ನ ಕೊಲೆ ಮಾಡಿರುವ ಘಟನೆ ರಾಯಚೂರಿನ ದೇವದುರ್ಗ ತಾಲೂಕಿನ ಎನ್ ಗಣೇಕಲ್ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

40 ವರ್ಷದ ಮಹೇಶ್ ಕೊಲೆಯಾಗಿರುವ ರೈತ. ಮಹೇಶ್ ಅವರ ಪಕ್ಕದ ಜಮೀನಿನ ರೈತ ಆಂಜಿನಪ್ಪ ಕೊಲೆ ಆರೋಪಿ. ನಾರಾಯಣಪುರ ಬಲದಂಡೆ ಕಾಲುವೆ ನೀರಿಗಾಗಿ ಇವರಿಬ್ಬರ ಮಧ್ಯೆ ಹಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಏಪ್ರಿಲ್ 4ರಂದು ಜಗಳ ವಿಪರೀತ ಮಟ್ಟಕ್ಕೆ ಹೋಗಿ ದೊಣ್ಣೆಯಿಂದ ಹೊಡೆದು ಮಹೇಶ್‍ನನ್ನ ಕೊಲೆ ಮಾಡಿದ್ದ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಆರೋಪಿ ಆಂಜಿನಪ್ಪ ಕೊಲೆಯನ್ನು ಅಪಘಾತ ಎಂದು ಬಿಂಬಿಸಿದ್ದ. ಬೈಕ್ ಅಪಘಾತದಲ್ಲಿ ಮಹೇಶ್ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಆದ್ರೆ ಗಬ್ಬೂರು ಠಾಣೆಯ ಪೊಲೀಸರು ಮಹೇಶನ ಮೈಮೇಲಿನ ಗಾಯದ ಗುರುತುಗಳಿಂದ ಅನುಮಾನಗೊಂಡು ತನಿಖೆ ನಡೆಸಿದಾಗ ಆಂಜಿನಪ್ಪ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಅಂಜಿಪ್ಪನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

 

Comments

Leave a Reply

Your email address will not be published. Required fields are marked *