ಒನ್‍ವೇಯಲ್ಲಿ ಫೋನ್‍ನಲ್ಲಿ ಮಾತಾಡ್ಕೊಂಡು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ

ಬೆಂಗಳೂರು: ಒನ್ ವೇಯಲ್ಲಿ ಬರುವುದಲ್ಲದೇ ಫೋನ್‍ನಲ್ಲಿ ಕೂಡ ಮಾತಾಡಿಕೊಂಡು ಬಂದಿದ್ದನ್ನು ಪ್ರಶ್ನೆ ಮಾಡಿದ ಟ್ರಾಫಿಕ್ ಪೊಲೀಸ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ನಗರದ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಆರೋಪಿ ದಿಲೀಪ್ ಎಂಬಾತ ಎಚ್‍ಎಸ್‍ಅರ್ ಟ್ರಾಫಿಕ್ ಪೇದೆ ಭೀಮಶಂಕರ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆ ಎರಡು ದಿನಗಳ ಹಿಂದೆ ಅಂದರೆ ಗುರುವಾರ ಬೆಳಿಗ್ಗೆ ಸುಮಾರು 10.30ಕ್ಕೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ದಿಲೀಪ್ ಸರ್ಜಾಪುರದ ಒನ್ ವೇ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದ. ಅಷ್ಟೇ ಅಲ್ಲದೇ ಡ್ರೈವ್ ಮಾಡುತ್ತಿದ್ದಾಗ ಫೋನಿನಲ್ಲಿ ಮಾತನಾಡಿಕೊಂಡು ಬಂದಿದ್ದಾನೆ. ನಂತರ ಟ್ರಾಫಿಕ್ ಪೊಲೀಸ್ ಭೀಮಶಂಕರ್ ಅವರು ಕಾರನ್ನು ತಡೆದು ಒನ್ ವೇಯಲ್ಲಿ, ಅದೂ ಫೋನಿನಲ್ಲಿ ಮಾತಾಡಿಕೊಂಡು ಬರುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿ ಫೈನ್ ಹಾಕಲು ಮುಂದಾಗಿದ್ದಾರೆ. ಇದರಿಂದ ಕೋಪಕೊಂಡ ದಿಲೀಪ್ ತನ್ನ ಕಾರಿನಲ್ಲಿದ್ದ ಬೇಸ್‍ಬಾಲ್ ಬ್ಯಾಟ್ ತಂದು “ನನಗೆ ಫೈನ್ ಹಾಕ್ತೀಯಾ” ಎಂದು ಕರ್ತವ್ಯ ನಿರತ ಪೊಲೀಸ್ ಗೆ ಹೊಡೆದಿದ್ದಾನೆ.

ಈ ಘಟನೆ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ದಿಲೀಪ್‍ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಆತನನ್ನು ಜೈಲಿಗೆ ಕಳುಹಿಸಿದ್ದಾರೆ.

Comments

Leave a Reply

Your email address will not be published. Required fields are marked *