ತನ್ನ ಮದುವೆ ಆಹ್ವಾನಪತ್ರಿಕೆ ಮುದ್ರಣಕ್ಕೆ ಕೊಡಲು ಹೋಗುವಾಗ ಅಪಘಾತವಾಗಿ ವ್ಯಕ್ತಿ ಸಾವು

ಮಂಡ್ಯ: ತನ್ನ ಮದುವೆಯ ಆಹ್ವಾನ ಪತ್ರಿಕೆ ಮುದ್ರಣಕ್ಕೆ ಕೊಡಲು ಬೈಕ್‍ನಲ್ಲಿ ಹೋಗುತ್ತಿದ್ದಾಗ ಕೆಎಸ್‍ಆರ್‍ಟಿಸಿ ಬಸ್ ಹರಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ, ಕಿಕ್ಕೇರಿ ಸಮೀಪ ನಡೆದಿದೆ.

33 ವರ್ಷದ ಶೇಖರ್ ಮೃತ ದುರ್ದೈವಿ. ಡಿಂಕ ಗ್ರಾಮದ ಶೇಖರ್ ಅವರ ಮದುವೆ ಜನವರಿ 27 ಮತ್ತು 28 ರಂದು ನಿಗದಿಯಾಗಿತ್ತು. ಹೀಗಾಗಿ ತನ್ನ ಮದುವೆಯ ಆಹ್ವಾನ ಪತ್ರಿಕೆ ಮುದ್ರಣಕ್ಕೆ ಕೊಡಲು ಶೇಖರ್ ಹೋಗುತ್ತಿದ್ದರು. ಈ ವೇಳೆ ಕಿಕ್ಕೇರಿ ಸಮೀಪ ಶೇಖರ್ ಬೈಕ್‍ಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಶೇಖರ್ ತಲೆಯ ಮೇಲೆ ಬಸ್ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶೇಖರ್ ಸಾವಿನ ವಿಷಯ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *