ಆ್ಯಕ್ವಿವಾ ಹೋಂಡಾಗೆ ವಾಹನ ಡಿಕ್ಕಿ – ವ್ಯಕ್ತಿ ಹಾರಿ ಹೋಗಿ ವಿಭಜಕದ ಸರಳಿಗೆ ಸಿಲುಕಿ ದುರ್ಮರಣ

ತುಮಕೂರು: ಆ್ಯಕ್ವಿವಾ ಹೋಂಡಾ ಅಪಘಾತವಾದ ರಭಸಕ್ಕೆ ರಸ್ತೆ ವಿಭಜಕದ ಸರಳು ಸವಾರನ ಕುತ್ತಿಗೆ ಸೀಳಿದ ಪರಿಣಾಮ ವಿಲವಿಲನೆ ಒದ್ದಾಡಿ ಪ್ರಾಣ ಬಿಟ್ಟ ದಾರುಣ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 48 ರ ಲಿಂಗಾಪುರದ ಬಳಿ ಈ ಘಟನೆ ನಡೆದಿದೆ. ನಗರದ ಶಿರಾ ಗೇಟ್ ಮೂಲದ 65 ವರ್ಷದ ರುದ್ರಪ್ಪ ಮೃತ ದುರ್ದೈವಿ. ಪತ್ನಿ ಮಲ್ಲಮ್ಮರನ್ನು ಕೂರಿಸಿಕೊಂಡು ಆ್ಯಕ್ವಿವಾ ಹೋಂಡಾದಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನ ಬಂದು ವೇಗವಾಗಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ರುದ್ರಪ್ಪ ಹಾರಿ ಹೋಗಿ ರಸ್ತೆ ವಿಭಜಕದ ಕಂಬಿ ಮೇಲೆ ಬಿದ್ದಿದ್ದಾರೆ. ಪರಿಣಾಮ ಸರಳು ಕುತ್ತಿಗೆಯನ್ನು ಸೀಳಿ ಕಣ್ಣಿನ ಮೂಲಕ ಹೊರ ಬಂದಿದೆ. ಸವಾರ ವಿಲವಿಲನೆ ಒದ್ದಾಡಿ ಅಲ್ಲೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಪತ್ನಿ ಮಲ್ಲಮ್ಮರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆ ಕುರಿತು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸರಳಿನಿಂದ ಕುತ್ತಿಗೆಯನ್ನು ಹೊರ ತೆಗೆಯಲು ಆಸ್ಪತ್ರೆ ಸಿಬ್ಬಂದಿ ಮತ್ತು ಸ್ಥಳೀಯರು ಹರಸಾಹಸಪಟ್ಟಿದ್ದಾರೆ.

Comments

Leave a Reply

Your email address will not be published. Required fields are marked *