ಬಡ್ಡಿ ಕಟ್ಟು, ಇಲ್ಲ ಹೆಂಡ್ತಿನ ಕಳಿಸು ಎಂದ ದಂಧೆಕೋರ- ಮನನೊಂದು ಆ್ಯಸಿಡ್ ಕುಡಿದು ಪತಿ ಆತ್ಮಹತ್ಯೆ

ಶಿವಮೊಗ್ಗ: ಬಡ್ಡಿ ಕಟ್ಟು, ಇಲ್ಲ ನಿನ್ನ ಹೆಂಡತಿಯನ್ನ ಕಳಿಸು ಎಂಬ ಮೀಟರ್ ಬಡ್ಡಿ ಮಾಫಿಯಾದವನ ಮಾತಿಗೆ ಮನನೊಂದ ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲಿ ನಡೆದಿದೆ.

ರಾಜಸ್ಥಾನ ಮೂಲದ ಕಲ್ಯಾಣ್ ಸಿಂಗ್ ಚೌಧರಿ ಆತ್ಮಹತ್ಯೆ ಮಾಡಿಕೊಂಡ ಬಟ್ಟೆ ವ್ಯಾಪಾರಿ. ಕಲ್ಯಾಣ್ ಸಿಂಗ್ ಹದಿನೈದು ವರ್ಷದಿಂದ ರಿಪ್ಪನ್‍ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಇವರು ಆತ್ಮಹತ್ಯೆ ಮಾಡಿಕೊಳ್ಳಲು ಮಹ್ಮದ್ ರಫಿ ಆಲಿಯಾಸ್ ಬಡ್ಡಿ ಮಾಮು ಕಾರಣ ಎಂದು ಕಲ್ಯಾಣ್ ಸಿಂಗ್ ಚೌಧರಿ ಪತ್ನಿ ರೇಖಾ ಚೌಧರಿ ರಿಪ್ಪನ್‍ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಲ್ಯಾಣ್ ಸಿಂಗ್ ತಮ್ಮ ವ್ಯವಹಾರಕ್ಕಾಗಿ ಮೀಟರ್ ಬಡ್ಡಿಯಂತೆ ಹಣ ಪಡೆದಿದ್ದರು. ಆದರೆ ಬಡ್ಡಿ ಹಣ ಹಿಂತಿರುಗಿಸುವಲ್ಲಿ ವಿಳಂಬವಾಗಿತ್ತು. ಇದರಿಂದಾಗಿ ಅಂಗಡಿಗೆ ಬಂದ ಬಡ್ಡಿ ಮಾಮು ಮತ್ತು ಇನ್ನಿತರರು ಗ್ರಾಹಕರ ಎದುರೇ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಅಲ್ಲದೆ ನಾಳೆಯೊಳಗಾಗಿ ಬಡ್ಡಿ ಕಟ್ಟು, ಇಲ್ಲದಿದ್ದರೆ ಹೆಂಡತಿ ಕಳಿಸು ಅಂತ ಹೇಳಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.

ಬಡ್ಡಿ ಮಾಮುವಿನ ಚುಚ್ಚು ಮಾತುಗಳಿಂದ ಮನನೊಂದ ಕಲ್ಯಾಣ್ ಸಿಂಗ್ ಚೌಧರಿ ಮನೆಗೆ ಬಂದು ಟೈಲ್ಸ್ ಸ್ವಚ್ಛ ಮಾಡುವ ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲ್ಯಾಣ್ ಸಿಂಗ್ ಶವ ಪರೀಕ್ಷೆ ಮಾಡಿಸಿ, ಅಂತ್ಯ ಸಂಸ್ಕಾರಕ್ಕಾಗಿ ರಾಜಸ್ಥಾನಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ: ಸಾಲ ಮಾಡ್ಬೇಡಿ ಫ್ರೆಂಡ್ಸ್- ವಿಡಿಯೋ ರೆಕಾರ್ಡ್ ಮಾಡಿ ಕ್ಯಾಬ್ ಚಾಲಕ ಆತ್ಮಹತ್ಯೆ

Comments

Leave a Reply

Your email address will not be published. Required fields are marked *