ಸ್ನೇಹಿತೆ ಜೊತೆ ಲಾಡ್ಜ್ ಗೆ ಹೋಗಿದ್ದ ಯುವಕನನ್ನು ಹಣಕ್ಕಾಗಿ ಬೆದರಿಸಿದ ಆರೋಪಿಯ ಬಂಧನ!

ಬೆಂಗಳೂರು: ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಮಾರತ್‍ಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮಹೇಂದ್ರ ಕುಮಾರ್ ಬಂಧಿತ ಆರೋಪಿ. ಜೂನ್ 10ರಂದು ಮಹೇಂದ್ರ ಲಾಡ್ಜ್ ಗೆ ಹೋಗಿ ಯುವಕನನ್ನು ಬೆದರಿಸಿದ್ದನು.

ಯುವಕನೊಬ್ಬ ತನ್ನ ಸ್ನೇಹಿತೆ ಜೊತೆಗೆ ಲಾಡ್ಜ್ ಗೆ ಹೋಗಿದ್ದ. ಆಗ ಮಹೇಂದ್ರ ಮಧ್ಯರಾತ್ರಿ ಲಾಡ್ಜ್ ರೂಮ್‍ಗೆ ಹೋಗಿ ಯುವಕನಿಗೆ ಬೆದರಿಕೆ ಹಾಕಿದ್ದಾನೆ. ಲಾಡ್ಜ್ ರೂಮ್‍ನಲ್ಲಿ ಏನ್ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸಿ, ನಿಮ್ಮ ವಿಡಿಯೋಗಳು ಸಹ ನಮ್ಮ ಬಳಿ ಇದೆ ಎಂದು ಹೇಳಿ 50 ಸಾವಿರ ರೂ. ಹಣದ ಬೇಡಿಕೆ ಇಟ್ಟನು. ಹಣ ನೀಡಿಲ್ಲ ಎಂದರೆ ಸಾಮಾಜಿಕ ಜಾಲತಾಣಕ್ಕೆ ವಿಡಿಯೋ ಹಾಕುತ್ತೇನೆ ಎಂದು ಬೆದರಿಸಿದ್ದಾನೆ.

ಕೊನೆಗೆ ದೂರುದಾರ ಯುವಕ ಹಣ ಕೊಡಲು ಒಪ್ಪಿಕೊಂಡನು. ಬಳಿಕ ಮಹೇಂದ್ರ ಯುವಕನನ್ನು ಕಾರಿನಲ್ಲಿ ಎಟಿಎಂಗೆ ಕರೆದುಕೊಂಡು ಹೋಗಿ 20 ಸಾವಿರ ರೂ. ಡ್ರಾ ಮಾಡಿಸಿಕೊಂಡಿದ್ದನು. ಹಣ ಪಡೆದ ಬಳಿಕ ಮಹೇಂದ್ರ ಯುವಕನನ್ನು ಕೆಆರ್ ಪುರಂ ಬಳಿ ಬಿಟ್ಟು ಹೋಗಿದ್ದಾನೆ.

ಇದಾದ ಬಳಿಕ ಮಹೇಂದ್ರ ಮತ್ತೆ ಯುವಕನ ಮೊಬೈಲ್‍ಗೆ ಕರೆ ಮಾಡಿ ಉಳಿದ ಹಣವನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಂತಿಮವಾಗಿ ಯುವಕ ಮಾರತ್‍ಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹೇಂದ್ರ ವಿರುದ್ಧ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಜೈ ಭಾರತ್ ಸಂಘ ಎನ್ನುವ ಸಂಘಟನೆ ಮಾಡಿಕೊಂಡಿದ್ದನೆ ಎಂದು ತಿಳಿದು ಬಂದಿದೆ. ಮೂರು ವರ್ಷಗಳಿಂದ ಆರೋಪಿ ಇದೇ ರೀತಿ ಕೃತ್ಯ ಎಸಗುತ್ತಿದ್ದನು. ಆದರೆ ನೊಂದವರು ಮಾನಕ್ಕೆ ಹೆದರಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಈಗ ಅಂತಿಮವಾಗಿ ಮಾರತ್‍ಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಮಹೇಂದ್ರನನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *